ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮತ್ತೆ ಇಬ್ಬರು ನಾಗರಿಕರು ಬಲಿ
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಮುಂದುವರೆದಿದೆ. ಭಯೋತ್ಪಾದಕರು ಹಾರಿಸಿದ ಗುಂಡಿಗೆ ಮತ್ತೆ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಈ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನ ವಾನ್ಪೋಹ್ ಪ್ರದೇಶದಲ್ಲಿ ನಡೆದಿದೆ.
ಕಾಶ್ಮೀರಿ ಅಲ್ಲದ ಮೂವರು ಕಾರ್ಮಿಕರಾದ ರಾಜಾ ರೇಶಿ ದೇವ್, ಜೋಗಿಂದರ್ ರೇಶಿ ದೇವ್ ಮತ್ತು ಚುಂಚುನ್ ರೇಶಿ ದೇವ್ ಎಂಬವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಈ ಮೂವರಲ್ಲಿ ರಾಜಾ ರೇಶಿ ದೇವ್, ಜೋಗಿಂದರ್ ರೆಶಿ ದೇವ್ ಮೃತಪಟ್ಟಿದ್ದು, ಚುಂಚುನ್ ರೇಶಿ ದೇವ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಬಿಹಾರ ಮೂಲದ ಗೋಲ್ಗಪ್ಪ ಮಾರಾಟ ಮಾಡುತ್ತಿದ್ದ ಅರವಿಂದ್ ಕುಮಾರ್ ಅವರನ್ನು ಶ್ರೀನಗರದ ಈದ್ಗಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಉತ್ತರ ಪ್ರದೇಶದ ಕಾರ್ಮಿಕ ಸಗೀರ್ ಅಹ್ಮದ್ ಅವರನ್ನು ಪುಲ್ವಾಮಾದಲ್ಲಿ ಹತ್ಯೆಗೈದಿದ್ದರು.
ಈ ಮೊದಲು ಮೂವರು ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು. ಇದರಲ್ಲಿ ಪ್ರಮುಖ ನಗರದ ಅತ್ಯಂತ ಪ್ರಸಿದ್ಧ ಔಷಧಾಲಯದ ಮಾಲೀಕ, ಕಾಶ್ಮೀರಿ ಪಂಡಿತ್ ಉದ್ಯಮಿ ಮಖನ್ ಲಾಲ್ ಬಿಂದ್ರೂ ಮತ್ತು ಬಿಹಾರದ ನಿವಾಸಿ ಗೋಲ್ಗಪ್ಪ ಮಾರಾಟ ಮಾಡುತ್ತಿದ್ದ ಅರವಿಂದ್ ಅವರನ್ನು ಗುಂಡಿಕ್ಕಿ ಕೊಂದಿದ್ದರು.
ಕಾಶ್ಮೀರ ಪೊಲೀಸರ ಉಗ್ರ ನಿಗ್ರಹ ಘಟಕದ ಕೇಂದ್ರ ಕಚೇರಿಯಾದ ಹಿರಿಯ ಪೊಲೀಸ್ ಅಧೀಕ್ಷಕರ ಕಛೇರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಇಕ್ಬಾಲ್ ಪಾರ್ಕ್ನಲ್ಲಿ ಔಷಧಾಲಯದಲ್ಲಿ ಔಷಧ ವಿತರಿಸುವಾಗ ಬಿಂದ್ರೂ ಮೇಲೆ ಉಗ್ರರು ದಾಳಿ ಮಾಡಿದ್ದರು.