ಹುಬ್ಬಳ್ಳಿ: ಚುನಾವಣೆ ಸಂದರ್ಭದಲ್ಲಿಯೇ ವಿಧಾನ ಪರಿಷತ್ ಸ್ಥಾನಕ್ಕೆ ಕೆ.ಪಿ. ನಂಜುಂಡಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಚುನಾವಣೆ ವೇಳೆಯೇ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ.
ನಗರದಲ್ಲಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕಾರ ಮಾಡಿದ್ದು, ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ನಂಜುಂಡಿ ಹೇಳಿದ್ದಾರೆ. ಕೆ.ಪಿ. ನಂಜುಂಡಿ ಅವರು ವಿಶ್ವಕರ್ಮ ಸಮುದಾಯದ ನಾಯಕರಾಗಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಂಜುಂಡಿ, ರಾಜಕಾರಣ ನನ್ನ ವೃತ್ತಿ ಅಲ್ಲ. ನನ್ನ ಸಮಾಜದ ಅಭಿವೃದ್ಧಿಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಹಿಂದುಳಿದ ವರ್ಗಗಳ ಧ್ವನಿಯಾಗಿ ನನ್ನನ್ನು ಬಳಸಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಬಿಜೆಪಿ ನನ್ನನ್ನು ಹಾಗೆ ಬಳಕೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಕೇವಲ ವಿಪ ಸದಸ್ಯನಾಗಿ ಉಳಿದರೆ ನನ್ನ ಸಮಾಜದ ಅಭಿವೃದ್ಧಿ ಆಗುವುದಿಲ್ಲ. ಎಂಎಲ್ಸಿ ಆದರೆ, ನನ್ನ ಸಮಾಜಕ್ಕೆ ಎಲ್ಲವೂ ಸಿಗುತ್ತದೆ ಎಂಬುವುದು ತಪ್ಪು. ನಾನು ಮೋದಿ ಬಗ್ಗೆ, ಪಕ್ಷದ ಬಗ್ಗೆ ಏನೂ ಮಾತನಾಡಲ್ಲ. ಆದರೆ ಪಕ್ಷದಲ್ಲಿ ನಾನು ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇನೆ. ನನಗೆ ಸಚಿವ ಸ್ಥಾನ ನೀಡಬೇಕಿತ್ತು. ಸಚಿವನಾಗುವ ಅರ್ಹತೆ ನನಗೆ ಇದೆ ಎಂದು ಹೇಳಿದರು.
ಅಲ್ಲದೇ, ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ ಅವರು, ಬುಧವಾರ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗುವೆ ಎಂದು ಹೇಳಿದ್ದಾರೆ.