ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ
ನೀವೆಲ್ಲ ಬೆಂಗಳೂರಿನ ಸದಾಶಿವ ನಗರ ಅಥವಾ ಮಂಗಳೂರಿನ ಪ್ರಸಿದ್ಧ ಕೆ.ಎಸ್ ರೋಡ್ ಹೆಸರು ಕೇಳಿರಬಹುದು. ಆದರೆ ಆ ಹೆಸರಿನ ಹಿಂದೆ ಇರುವ ಒಬ್ಬ ಧೀಮಂತ ಸ್ವಾತಂತ್ರ್ರ ಯೋಧ, ದಕ್ಷಿಣ ಭಾರತದ ಗಾಂಧಿ ಎಂದೇ ಹೆಸರು ವಾಸಿಯಾದ ನಮ್ಮ ರಾಜ್ಯದ ಕಾರ್ನಾಡ್ ಸದಾಶಿವ ರಾವ್ ಬಗ್ಗೆ ಈ ವರ್ಷದ ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಒಂದಿಷ್ಟು ತಿಳಿಯೋಣ.
1857ರ ನಂತರ ಭಾರತವನ್ನು ಬ್ರಿಟಿಷರು ಸಂಪೂರ್ಣವಾಗಿ ತನ್ನ ಹಿಡಿತವನ್ನು ಸಾಧಿಸಿ ಕೆಲವಷ್ಟು ಸಾಮಂತ ರಾಜರನ್ನು ಮಾತ್ರ ತನ್ನ ಆಡಳಿತದ ಅನುಕೂಲತೆಗೆ ನೇಮಿಸಿದ್ದರು. ಆ ಸಾಮಂತರಾಜರಿಗೋ ಬ್ರಿಟಿಷ್ ಅಧಿಪತ್ಯದ ವಿರುದ್ಧ ಮಾತಾಡುವ ಕೊಂಚ ಧೈರ್ಯವೂ ಇರಲಿಲ್ಲ. ಅಲ್ಲಿಂದ ನಂತರ ವ್ಯಕ್ತಿಗತ ಸ್ವಾತಂತ್ರದ ಕಿಚ್ಚು ನಿಧಾನವಾಗಿ ಶುರುವಾಯಿತು. ಆದರೆ ಯಾವುದೇ ಸಂಪರ್ಕ ಕೊಂಡಿ ಇಲ್ಲದೆ ನೂರಾರು ರಾಜರ ಆಳ್ವಿಕೆಯಲ್ಲಿ ಅಡಿಯಾಳಾಗಿದ್ದ ನಮ್ಮ ಜನಕ್ಕೆ ಪ್ರಾಯಶ: ಸ್ವಾತಂತ್ರದ ಕಲ್ಪನೆ ಕೂಡ ಇರಲು ಅಸಾಧ್ಯ. ಒಂದು ರೀತಿಯಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಬ್ರಿಟಿಷ್ ಆಳ್ವಿಕೆಯೇ ಮುನ್ನುಡಿ ಬರೆಯಿತು ಅಂದ್ರು ತಪ್ಪಾಗಲ್ಲ. ಛಿದ್ರ ಛಿದ್ರವಾಗಿ ಅಲ್ಲಲ್ಲಿ ಒಂದಿಷ್ಟು ಹಠವಾದಿಗಳು ಪಟ್ಟು ಬಿಡದೆ ಏಕಾಂಗಿಯಾಗಿ ಬ್ರಿಟಿಷ್ ಸಾಮ್ರಾಜ್ಯದ ಕಪಿ ಮುಷ್ಟಿಯ ವಿರುದ್ಧ ಹೋರಾಟ ಮಾಡಿದ್ದೂ ಬಿಟ್ಟರೆ ಹೆಚ್ಚಿನ ಜನ ಯಾವುದೇ ಪರಿವಿಲ್ಲದೆ ತಮ್ಮಷ್ಟಕ್ಕೆ ಇದ್ದರು. ಸಂಘಟನಾತ್ಮಕ ಚಳುವಳಿಗಳ ಮೂಲಕ ಅಖಂಡ ಭಾರತದಲ್ಲಿ ಜನರ ಮನಸ್ಸನ್ನು ಸೂಕ್ತ ದಿಕ್ಕಿನ ಕಡೆ ಕೊಂಡೊಯ್ಯುವ ನಾಯಕತ್ವವೇ ಆಗ ಇಲ್ಲವಾಗಿತ್ತು. ಆ ಕಾಲವನ್ನು ಸ್ವಾತಂತ್ರ್ಯ ಚಳುವಳಿಯ ಶೈಶವಾವಸ್ಥೆ ಎಂದು ವ್ಯಾಖ್ಯಾನಿಸಬಹುದು.
ಕಾರ್ನಾಡ್ ಸದಾಶಿವರಾಯರು 1881ರಲ್ಲಿ ಮಂಗಳೂರಿನ ಆಗಿನ ಅತ್ಯಂತ ಶ್ರೀಮಂತ ಮನೆತನದಲ್ಲಿ ಹುಟ್ಟಿದರು. ಇವರ ತಂದೆ ರಾಮಚಂದ್ರರಾಯರು ವೃತ್ತಿಯಲ್ಲಿ ವಕೀಲರಾಗಿದ್ದರು, ತಾಯಿ ರಾಧಾಬಾಯಿ. ಈ ದಂಪತಿಯ ಏಕೈಕ ಪುತ್ರ ಕಾರ್ನಾಡ್ ಸದಾಶಿವ ರಾವ್. ಬಡವರನ್ನು ಕಂಡರೆ ಮರುಗುವ ಗುಣ ಚಿಕ್ಕ ಹುಡುಗನಾಗಿರುವಾಗಲೇ ಅವರಿಗೆ ಇತ್ತು. ತಂದೆಯ ಶಿಸ್ತು ಮತ್ತು ತಾಯಿಯ ಮಮತೆಯ ನಡುವೆ ಅನೇಕ ಸದ್ಗುಣಗಳನ್ನು ಚಿಕ್ಕಂದಿನಲ್ಲೇ ಮೈಗೂಡಿಸಿಕೊಂಡಿದ್ದರು ಅವರು.
ಸದಾಶಿವ ರಾವ್, ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ, ಮುಂಬೈನಲ್ಲಿ ವಕೀಲ ಶಿಕ್ಷಣ ಪೂರೈಸಿದರು. ಈ ಸಮಯದಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯು ಕಾಂಗ್ರೆಸ್ ಸಂಘಟನೆಯ ಮೂಲಕ ಗಾಂಧೀಜಿಯವರು ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಲಾಗಿತ್ತು. ಹೀಗಾಗಿ ಸದಾಶಿವ ರಾಯರೂ ಕೂಡ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದರು.
ಸಾಮಾಜಿಕ ಕ್ರಾಂತಿ :
ಜಾತಿ ತಾರತಮ್ಯ, ಮೂಢನಂಬಿಕೆ ವಿರುದ್ಧ ಹೋರಾಡಿದ ಸದಾಶಿವ ರಾವ್, ಸಾಮಾಜಿಕ ಕ್ಷೇತ್ರಗಳಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಕೊನೆಯವರೆಗೂ ಹೋರಾಟ ನಡೆಸುತ್ತಿದ್ದರು. ಕೆಲವರ್ಗದವರಿಗೂ ದೇವಸ್ಥಾನ ಪ್ರವೇಶಕ್ಕೆ ಅನುವು ಮಾಡಲು ಪರಿಶ್ರಮಿಸಿದರು. ವಿಧವೆಯರು ಮತ್ತು ಬಡ ಮಹಿಳೆಯರಿಗೆ ಸಹಾಯ ಮಾಡಲು ಅವರು ಮಹಿಳಾ ಸಭೆಯನ್ನು ಸ್ಥಾಪಿಸಿ ಅವರನ್ನು ಸಬಲೀಕರಿಸಲು ಪಣ ತೊಟ್ಟರು. ವಿಧವಾ ವಿವಾಹ ಮತ್ತು ಸ್ವಾವಲಂಬಿ ಬದುಕು ರೂಪಿಸುವಲ್ಲಿ ನಿರಂತರ ಶ್ರಮಿಸಿದರು. ತಿಲಕ್ ವಿದ್ಯಾಲಯ ಹೆಸರಿನಲ್ಲಿ ಮನೆಯಲ್ಲಿ ಶಾಲೆಯನ್ನು ನಿರ್ಮಿಸಿ ಸಮಾಜದ ಎಲ್ಲ ವರ್ಗದ ಜನರಿಗೆ ಮುಕ್ತವಾಗಿ ನೇಯ್ಗೆ ಮತ್ತು ಇತರ ಕರಕುಶಲ ತರಬೇತಿ ನೀಡಿದರು. ಹಿಂದಿ ಭಾಷೆಯನ್ನು ಜನರಿಗೆ ಪರಿಚಯಿಸಿದರು. ಮುಂದೆ ಹತ್ತು ಹಲವು ಶಾಲೆಗಳು ಸುತ್ತಮುತ್ತ ಶುರುವಾದವು. ಪ್ರಾಣಿ ಬಲಿಯನ್ನು ತೀವ್ರವಾಗಿ ವಿರೋಧಿಸಿದ ರಾವ್ ಉತ್ತರ ಕನ್ನಡದ ಕಾಳಿ ದೇವಸ್ಥಾನದಲ್ಲಿ ಪ್ರಾಣಿ ವಧೆಯನ್ನು ನಿಲ್ಲಿಸುವಲ್ಲಿ ಸಫಲರಾದರು.
1919ರ ಹೊತ್ತಿಗೆ, ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಗಾಂಧಿಯವರ ಸತ್ಯಾಗ್ರಹ ಚಳವಳಿಗೆ ಸ್ವಯಂಸೇವಕರಾಗಿ ಕರ್ನಾಟಕದಿಂದ ಭಾಗಿಯಾದ ಮೊದಲಿಗರು ಅವರು. ಕಾಂಗ್ರೆಸ್ ಪಕ್ಷದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದ ಕಾರ್ನಾಡ್ ಸದಾಶಿವ ರಾವ್, ಕರ್ನಾಟಕದಲ್ಲಿ ಪಕ್ಷವನ್ನು ವಿಸ್ತರಿಸುವ ಜವಾಬ್ದಾರಿಯನ್ನು ಹೊತ್ತಿದ್ದರು.
1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದವರು ಕಾರ್ನಾಡ್ ಸದಾಶಿವ ರಾಯರು. ಇವರ ಹೋರಾಟದ ಫಲವಾಗಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿತು. ಗಾಂಧಿ, ಸರೋಜಿನಿ ನಾಯ್ಡು, ಸಿ ಆರ್ ದಾಸ್ , ರಾಜಗೋಪಾಲಾಚಾರಿ, ನೆಹರು ಮುಂತಾದ ನಾಯಕರಿಗೆ ರಾವ್ ಮನೆಯೇ ಕಾಂಗ್ರೆಸ್ ಕಾರ್ಯಚಟುವಟಿಕೆಯ ಕೇಂದ್ರ ಬಿಂದು.
1923 ರಲ್ಲಿ ತನ್ನ ಮಗ ಮಗಳು ಮತ್ತು ತನ್ನ ಎಲ್ಲ ಸಾಮಾಜಿಕ ಚಟುವಟಿಕೆಗೂ ಬೆನ್ನೆಲುಬಾಗಿದ್ದ ಶಾಂತಾಬಾಯಿ ಅಗಲುವಿಕೆ ಅವರನ್ನು ಜರ್ಜರಿತಗೊಳಿಸಿತು. ಭಾರದ ಮನಸ್ಸಿಂದ ಸಾಂತ್ವನ ಪಡೆಯಲು ಸಾಬರಮತಿ ಆಶ್ರಮಕ್ಕೆ ಹೋದರು. ಆದರೆ ಅದಾಗಲೇ ತನ್ನ ಜಿಲ್ಲೆಯಲ್ಲಿ ಆದ ನೆರೆ ಹಾವಳಿ ಮತ್ತು ಮೊದಲ ವಿಶ್ವ ಯುದ್ಧದ ಪರಿಣಾಮವಾಗಿ ಜನ ಹಸಿವಿನಿಂದ ಸಾಯುತ್ತಿದ್ದಿದ್ದನ್ನು ನೋಡಲಾಗದೆ ತನ್ನಲ್ಲಿದ್ದ ಎಲ್ಲವನ್ನು ಬಡವರ ಸೇವೆಗೆ ವಿನಿಯೋಗಿಸಿದರು. ಬೇರೆ ಕಡೆಯಿಂದಲೂ ಅಗತ್ಯ ಪರಿಕರಗಳನ್ನು ತಂದು ಅತಿ ಕಡಿಮೆ ದರದಲ್ಲಿ ಬಡವರಿಗೆ ನೀಡಿದಲ್ಲದೆ, ತನ್ನ ಭೂಮಿಯಲ್ಲೇ ಧಾನ್ಯ ಉತ್ಪಾದಿಸಲು ತೊಡಗಿದರು.
ವಿವಿಧ ಸಮುದಾಯಗಳನ್ನು ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರಕ್ಕಾಗಿ ಒಂದು ಮಾಡಿದವರು ಕಾರ್ನಾಡ್ ಸದಾಶಿವರಾವ್. ಅವರನ್ನು ಮೂರು ಬಾರಿ ಜೈಲಿಗೆ ಹಾಕಲಾಯಿತು. ಆದರೆ ಐದು ವರ್ಷಗಳಲ್ಲಿ, ಅವರ ಆರೋಗ್ಯ ಹದಗೆಟ್ಟಿತು. ಜೈಲು ವಾಸದ ಸಮಯದಲ್ಲಿ ಇತರರಿಗೆ ಸೊಳ್ಳೆ-ಪರದೆ ನಿರಾಕರಿಸಿದ ಕಾರಣ ತಾನು ಅದನ್ನು ಸ್ವೀಕರಿಸದೇ ಹಾಸಿಗೆ ಹಿಡಿದರು. ತನ್ನೆಲ್ಲ ಸಂಪತ್ತನ್ನೂ ಕಳೆದುಕೊಂಡ ರಾವ್, 1936 ಫೈಜ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾದರು. ಆದರೆ ತೀವ್ರ ಜ್ವರ ಅವರನ್ನು ಹೈರಾಣಾಗಿಸಿತ್ತು. ಅಲ್ಲಿಂದ ಮುಂಬೈಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9ರಂದು ಸಾವನ್ನಪ್ಪಿದ್ದರು.
ಒಟ್ಟಿನಲ್ಲಿ ತನ್ನ ಸಾಮಾಜಿಕ ಚಳುವಳಿಯ ಜೊತೆ ಸ್ವತಂತ್ರ ಹೋರಾಟವನ್ನು ನಡೆಸಿ, ದಿನ ದಲಿತರ, ಕೆಳವರ್ಗದ ಶೋಷಣೆಯ ವಿರುದ್ಧ ಹೋರಾಡಿ ಅವರ ಸುಧಾರಣೆಗೆ ಶ್ರಮಿಸಿದ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಸ್ವಾತಂತ್ರದ ಕಿಚ್ಚನ್ನು ನಿರ್ಮಿಸಿ, ಗಾಂಧೀಜಿಯ ಹೋರಾಟದಿಂದ ಸ್ಫೂರ್ತಿ ಪಡೆದ ನಮ್ಮ ಕಾರ್ನಾಡ್ ಸದಾಶಿವ ರಾಯರ ಜೀವನ ನಮಗೆಲ್ಲರಿಗೂ ಆದರ್ಶ. ಈ ಪ್ರಾತಸ್ಮರಣೀಯರ ಹೆಸರನ್ನೇ ನಮ್ಮ ಬೆಂಗಳೂರಿನ ಅತ್ಯಂತ ವೈಭವದ ಸಿರಿವಂತರ ಏರಿಯಾಕ್ಕೆ ಇಟ್ಟು ಸದಾಶಿವ ನಗರವೆಂದು ಕರೆಯಲಾಗಿದೆ.