ನವದೆಹಲಿ: ವ್ಯಾಪಕ ಮಳೆಯಿಂದಾಗಿ ಅರುಣಾಚಲ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ. ಈ ವೇಳೆ ಚೀನಾದ ಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಒಂದು ಭಾಗ ಕೊಚ್ಚಿ ಹೋಗಿದೆ.
ಹುನ್ಲಿ ಹಾಗೂ ಅನಿನಿ ನಡುವಿನ ಹೆದ್ದಾರಿ ಸಂಪೂರ್ಣ ಕುಸಿದು ಹೋಗಿದೆ. ಇದನ್ನು ದಿಭಾಂಗ್ ಕಣಿವೆ ಅಂತಾ ಕರೆಯುತ್ತಾರೆ. ಈ ಕಣಿವೆ ದೇಶದ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಇದರ ಒಂದು ಬದಿ ಕುಸಿದಿರುವ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ, ಚೀನಾ ಗಡಿ ಸಂಪರ್ಕಿಸುವ ಪ್ರದೇಶ ಕೂಡ ಕುಸಿದಿದೆ. ಹೀಗಾಗಿ ಘಟನೆ ಕುರಿತು ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಎಂ, ವ್ಯಾಪಕ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ಹೆದ್ದಾರಿ ಕುಸಿತದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ರಸ್ತೆಯು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ಕಾರಣ ಶೀಘ್ರದಲ್ಲಿ ಮರುಸ್ಥಾಪಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಹೆದ್ದಾರಿಯನ್ನು ಮೂರು ದಿನಗಳಲ್ಲಿ ತೆರವು ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಡಳಿತವು ದಿಭಾಂಗ್ ಕಣಿವೆಯ ನಿವಾಸಿಗಳಿಗೆ ನೋಟಿಸ್ ನೀಡಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರೋಯಿಂಗ್ಗೆ ಸಂಪರ್ಕಿಸುವ NH 313 ರ ಪ್ರಮುಖ ಭಾಗವು ಬುಧವಾರದಂದು ಕೊಚ್ಚಿಹೋಗಿದೆ ಎಂದು ದಿಭಾಂಗ್ ಕಣಿವೆಯ ಎಲ್ಲಾ ನಿವಾಸಿಗಳಿಗೆ ತಿಳಿಸಿದೆ.