ಜುಲೈ 26ಕ್ಕೆ ಸಿಎಂ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ..? ಮುಂದಿನ ಸಿಎಂ ಯಾರಾಗ್ತಾರೆ ?
ಸಿಎಂ ಬಿ.ಎಸ್. ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಕುರಿತಂತೆ ನಡೆಯುತ್ತಿರುವ ಚರ್ಚೆಗಳಿಗೆ ಸದ್ಯದಲ್ಲೇ ತೆರೆ ಬೀಳುವ ಸಾಧ್ಯತೆಗಳಿವೆ. ಜುಲೈ 26 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಇಂಡಿಯಾ ಟಿವಿ ವೆಬ್ ಸೈಟ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮೊನ್ನೆಯಷ್ಟೇ ದೆಹಲಿ ಪ್ರವಾಸ ಮಾಡಿರುವ ಬಿಎಸ್ ವೈ, ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿದ್ದರು. ಈ ವೇಳೆ ರಾಜ್ಯದ ನಾನಾ ಅಭಿವೃದ್ದಿ ಯೋಜನೆಗಳ ಬಗ್ಗೆ ಚರ್ಚೆ ನಡೆದಿದೆ. ಅದಕ್ಕಿಂತ ಹೆಚ್ಚಾಗಿ ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆಯ ಬಗ್ಗೆ ಸಹ ಚರ್ಚೆ ನಡೆದಿದೆ ಎನ್ನಲಾಗಿದೆ. ಆರೋಗ್ಯ ಮತ್ತು ವಯಸ್ಸಿನ ಕಾರಣದ ಹಿನ್ನೆಲೆಯಲ್ಲಿ ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು. ಪಕ್ಷವನ್ನು ಬಲಪಡಿಸಲು ಹೊಸ ನಾಯಕತ್ವದ ಅನಿವಾರ್ಯತೆ ಇದೆ ಎಂಬುದನ್ನು ಬಿಜೆಪಿ ಹೈಕಮಾಂಡ್ ಬಿಎಸ್ ವೈ ಅವರಿಗೆ ಮನವರಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಿಎಸ್ ವೈ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ, ಬಿಎಸ್ ವೈ ಮಾತ್ರ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳುತ್ತಿದ್ದಾರೆ. ಇನ್ನು ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.
ಇದೆಲ್ಲಾ ಘಟನೆಗಳ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವ ಆಡಿಯೋ ವೈರಲ್ ಆಗಿದೆ. ಅದುವೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆನ್ನಲಾದ ಆಡಿಯೋ ಸಂಭಾಷಣೆ.
ನಳಿನ್ ಕುಮಾರ್ ಕಟೀಲ್ ಧ್ವನಿಯಲ್ಲಿರುವ ಈ ಆಡಿಯೋದಲ್ಲಿ ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರ ಟೀಮ್ ಅನ್ನು ಸಂಪೂರ್ಣವಾಗಿ ಹೊರಗಿಟ್ಟು, ಹೊಸ ಟೀಮ್ ಅನ್ನು ಕಟ್ಟಲಾಗುತ್ತಿದೆ. ಇನ್ನು ಮುಂದೆ ಎಲ್ಲವೂ ನಮ್ಮ ಕೈಯಲ್ಲಿರಲಿದೆ. ಯಾವುದೇ ಹೆದರಿಕೆ ಬೇಡ. ಹೈಕಮಾಂಡ್ ಬಳಿ ಮೂವರ ಹೆಸರಿದೆ. ಆ ಮೂವರು ಇಲ್ಲಿಯವರಲ್ಲ. ದೆಹಲಿಯವರು. ಇನ್ನು ಏನು ತೊಂದರೆ ಇಲ್ಲ ಎಂದು ತುಳು ಭಾಷೆಯಲ್ಲಿ ತನ್ನ ಆಪ್ತರ ಬಳಿ ಹೇಳಿಕೊಂಡಿರುವ ಆಡಿಯೋ ಸಂಭಾಷಣೆ ರಾಜ್ಯ ಬಿಜೆಪಿಯಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದೆ.
ಒಂದು ವೇಳೆ ನಳಿನ್ ಕುಮಾರ್ ಕಟೀಲ್ ಹೇಳಿದಂತೆ ನಡೆದ್ರೆ, ಸಂಘ ಪರಿವಾರದವರು ಸಿಎಂ ಸ್ಥಾನಕ್ಕೇರುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಯಾಕಂದ್ರೆ ನಳೀನ್ ಕುಮಾರ್ ಕಟೀಲ್ ಅವರು ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬೇಕಾದ್ರೆ ಸಂಘ ಪರಿವಾರದವರು ಸಿಎಂ ಸ್ಥಾನಕ್ಕೇರಬೇಕು. ಆಗ ಮಾತ್ರ ನಳಿನ್ ಕುಮಾರ್ ಕಟೀಲ್ ಗೂ ಪವರ್ ಸಿಗುತ್ತೆ. ಸದ್ಯ, ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾದ್ರೂ ಸಂಪೂರ್ಣ ಹಿಡಿತ ಅವರ ಕೈಯಲ್ಲಿಲ್ಲ. ಹೀಗಾಗಿ ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ಸಂಭಾಷಣೆಯನ್ನು ಗಮನಿಸಿದಾಗ ಕಟೀಲ್ ರಿಗೆ ಆಪ್ತರಾದವರೇ ಸಿಎಂ ಸ್ಥಾನಕ್ಕೇರಿದ್ರೂ ಆಶ್ಚರ್ಯ ಪಡಬೇಕಿಲ್ಲ ಎನ್ನಲಾಗುತ್ತಿದೆ.
ಇನ್ನೊಂದೆಡೆ ಯಡಿಯೂರಪ್ಪನವರಿಗೆ ತಮ್ಮ ಮಗ ವಿಜಯೇಂದ್ರ ಅವರನ್ನು ಮುಂಚೂಣಿಗೆ ತರಬೇಕು ಅನ್ನೋ ಮಹಾದಾಸೆಯೂ ಇದೆ. ಇದಕ್ಕೆ ಪೂರಕವಾಗಿ ನಾನಾ ರೀತಿಯ ವೇದಿಕೆ ಸೃಷ್ಟಿ ಮಾಡಿದ್ರೂ ಸ್ವಪಕ್ಷೀಯರೇ ಅಡ್ಡಗಾಲು ಹಾಕುತ್ತಿರುವುದು ಗೊತ್ತಿಲ್ಲದ ವಿಚಾರವೇನೂ ಅಲ್ಲ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಹಿಡಿತವನ್ನಿಟ್ಟುಕೊಳ್ಳಲು ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಹಾವೇರಿಯ ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಪ್ಲಾನ್ ಕೂಡ ಯಡಿಯೂರಪ್ಪನವರದ್ದಾಗಿದೆ.
ಒಟ್ಟಿನಲ್ಲಿ ಬಿಎಸ್ ವೈ ನಾಯಕತ್ವ ಬದಲಾವಣೆಯಾಗೋದು ಬಹುತೇಕ ಪಕ್ಕಾ ಆಗಿದೆ ಎಂಬ ಮಾತು ಎಲ್ಲ ಕಡೆಯಿಂದ ಕೇಳಿಬರುತ್ತಿದೆ. ಹಾಗಾದಲ್ಲಿ ಈ ಬಾರಿಯಾದ್ರೂ ಪೂರ್ಣ ಅವಧಿಗೆ ಸಿಎಂ ಆಗಿ ಮುಂದುವರಿಯಬೇಕು ಅನ್ನೋ ಬಿಎಸ್ ವೈ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣೀರೆರಚಿದಂತಾಗುತ್ತದೆ. ಈ ಹಿಂದೆ ಸಿಎಂ ಆಗಿದ್ದಾಗಲೂ ಸ್ವಪಕ್ಷೀಯರಿಂದಾಗಿಯೇ ಯಡಿಯೂರಪ್ಪ ಪೂರ್ಣಾವಧಿ ಮುಗಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿಯೂ ಅದೇ ರೀತಿ ಆಗುವ ಎಲ್ಲಾ ಸಾಧ್ಯತೆಗಳಿವೆ. ರಾಜಕೀಯ ಬದುಕಿನುದ್ದಕ್ಕೂ ಹೋರಾಟ ಮಾಡಿಕೊಂಡೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಹೆಗ್ಗಳಿಕೆ ಬಿಎಸ್ ವೈ ಅವರದ್ದು. ಆದರೆ ಅಧಿಕಾರಕ್ಕೆ ಬಂದಾಗ ಸ್ವಪಕ್ಷೀಯರೇ ಅವರ ಪಾಲಿಗೆ ದುಶ್ಮನ್ ಗಳಾಗ್ತಿರೋದು ವಿಪರ್ಯಾಸ. ಇದರ ಜೊತೆಗೆ ಅವರಿಗಿರುವ ಪುತ್ರ ವ್ಯಾಮೋಹ ಈ ಸಲ ಅಧಿಕಾರದಿಂದ ಕೆಳಗಿಳಯಲು ಪ್ರಮುಖ ಕಾರಣವಾಗಲಿದೆ ಎಂದೂ ಸಹ ಹೇಳಲಾಗ್ತಿದೆ.
ಒಟ್ಟಿನಲ್ಲಿ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಜುಲೈ 26 ಅತ್ಯಂತ ಪ್ರಮುಖ ದಿನವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಅಂದಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 2 ವರ್ಷಗಳು ತುಂಬಲಿದೆ. ಅದೇ ದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸಹ ಇದೆ. ಆ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಬಿಎಸ್ ವೈ ತಮಗಿರುವ ಬೆಂಬಲವನ್ನು ನಿರೂಪಿಸಲು ಪ್ರಯತ್ನಿಸ್ತಾರಾ..? ಇಲ್ಲ ಅದೇ ಸಭೆಯಲ್ಲಿ ತಮ್ಮ ರಾಜೀನಾಮೆಯ ವಿಚಾರ ಘೋಷಣೆ ಮಾಡ್ತಾರಾ..? ಯಡಿಯೂರಪ್ಪನವರ ಕೈ ಮೇಲಾಗುತ್ತಾ..? ಅಥವಾ ಅವರ ವಿರೋಧಿ ಪಡೆಯ ಕೈ ಮೇಲಾಗುತ್ತಾ..? ಅನ್ನೋ ಪ್ರಶ್ನೆಗಳಿಗೆ ಅಂದೇ ಉತ್ತರವೂ ಸಿಗಲಿದೆ
ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ಅವರು ಸ್ಪರ್ಧಿಸಿದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಈಸ್ಟ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪೆರಂಬೂರಿನಲ್ಲಿ...








