ಉತ್ತರಾಖಂಡ : ಆರು ತಿಂಗಳ ಚಳಿಗಾಲದ ವಿರಾಮದ ನಂತರ ಕೇದಾರನಾಥ ದೇವಸ್ಥಾನದ ಬಾಗಿಲು ಇಂದು ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ ತೆರೆಯಲಾಯಿತು. ಆದ್ರೆ ಲಾಕ್ ಡೌನ್ ಹಿನ್ನೆಲೆ ದೇವಸ್ಥಾನಕ್ಕೆ ಸಾರ್ವಜನಿಕ ಭೇಟಿಗೆ ನಿಷೇಧ ಹೇರಲಾಗಿದೆ. ಮಂಜುಗಡ್ಡೆಯಿಂದ ಆವೃತವಾಗಿರುವ ದೇವಸ್ಥಾನವನ್ನು 10 ಕ್ವಿಂಟಾಲ್ ಚೆಂಡು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ಕೇದಾರಧಾಮ ದೇವಸ್ಥಾನದ ಬಾಗಿಲು ತೆರೆಯುವ ಪ್ರಕ್ರಿಯೆ ಇಂದು ನಸುಕಿನ ಜಾವ 3 ಗಂಟೆಗೆ ಆರಂಭವಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಶಂಕರ ಲಿಂಗ 6 ತಿಂಗಳ ಬಳಿಕ ದೇವಸ್ಥಾನದ ಬಾಗಿಲು ತೆಗೆದು ವಿಧಿವಿಧಾನಗಳನ್ನು ನೆರವೇರಿಸಿದರು. ಇಂದು ಬೆಳಗ್ಗೆ ಮೊದಲ ಪೂಜೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮಾಡಿಸಲಾಯಿತು.
ಇಂದು ಬೆಳಗ್ಗೆ ಧಾರ್ಮಿಕ ವಿಧಿಗಳು ಮತ್ತು ಆರತಿ ನಡೆಯುವಾಗ ದೇವಸ್ವಂ ಮಂಡಳಿಯ ಪ್ರತಿನಿಧಿ ಬಿ ಡಿ ಸಿಂಗ್ ಮತ್ತು ಪಂಚಗೈಯ 20 ಮಂದಿ ನೌಕರರು ಹಾಜರಿದ್ದರು. ಅಲ್ಲದೆ ಸುಮಾರು 15 ಮಂದಿ ಪೊಲೀಸರು, ದೇವಸ್ಥಾನದ ಆಡಳಿತ ಅಧಿಕಾರಿಗಳು ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.