ಕೇರಳ – ಚಿನ್ನ ಕಳ್ಳಸಾಗಣೆ ತಂಡ ಪರಾರಿಯಾಗಲು ಪ್ರಯತ್ನ – ಇಬ್ಬರು ಡಿಆರ್ಐ ಅಧಿಕಾರಿಗಳಿಗೆ ಗಾಯ
ತಿರುವನಂತಪುರಂ, ಸೆಪ್ಟೆಂಬರ್08: ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣದ ಬಳಿ ಚಿನ್ನದ ಕಳ್ಳಸಾಗಣೆ ತಂಡ ಪರಾರಿಯಾಗಲೆತ್ನಿಸಿದಾಗ ಅವರನ್ನು ತಡೆಯಲು ಪ್ರಯತ್ನಿಸಿದ ಇಬ್ಬರು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು
ಪೊಲೀಸರು ತಿಳಿಸಿದ್ದಾರೆ.
ಕ್ಯಾಲಿಕಟ್ ವಿಮಾನ ನಿಲ್ದಾಣದ ಮೂಲಕ ಚಿನ್ನದ ಕಳ್ಳಸಾಗಾಣಿಕೆಗೆ ಪ್ರಯತ್ನಿಸಿದ ಅಪರಾಧಿಗಳನ್ನು ಆಲ್ಬರ್ಟ್ ಮತ್ತು ನಜೀಬ್ ಎಂಬ ಅಧಿಕಾರಿಗಳು ಬಂಧಿಸಲು ಪ್ರಯತ್ನಿಸುವಾಗ ಗಾಯಗೊಂಡಿದ್ದಾರೆ. ಕಳ್ಳಸಾಗಣೆ ಮಾಡಿದ ಚಿನ್ನವನ್ನು ವಿಮಾನ ನಿಲ್ದಾಣದ ಹೊರಗೆ ಕಾರಿನಲ್ಲಿ ಕಾಯುತ್ತಿದ್ದವರಿಗೆ ಹಸ್ತಾಂತರಿಸಿ ಪರಾರಿಯಾಗಲು ನೋಡಿದ ಅಪರಾಧಿಗಳನ್ನು ಡಿಆರ್ಐ ಅಧಿಕಾರಿಗಳ ತಂಡ ಹಿಂಬಾಲಿಸಿತು.
ಆಗ ಶಂಕಿತ ಕಳ್ಳಸಾಗಾಣಿಕೆದಾರರು ತಮ್ಮ ಕಾರನ್ನು ಡಿಆರ್ಐ ಅಧಿಕಾರಿಗಳಿದ್ದ ಬೈಕ್ಗೆ ನುಗ್ಗಿಸಿ ಪರಾರಿಯಾಗಲು ಯತ್ನಿಸಿದರು, ಆದರೆ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿರುವ ವಿದ್ಯುತ್ ಪೋಸ್ಟ್ಗೆ ನುಗ್ಗಿತು. ಘಟನೆ ವೇಳೆ ಆಲ್ಬರ್ಟ್ ಮತ್ತು ನಜೀಬ್ ಗಾಯಗೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಳ್ಳಸಾಗಾಣಿಕೆದಾರರು ಉದ್ದೇಶಪೂರ್ವಕವಾಗಿ ನಡೆಸಿದ ಹೊಂಚುದಾಳಿಯಲ್ಲಿ ಡಿಆರ್ಐ ಅಧಿಕಾರಿಗಳ ಬೈಕ್ ಸಂಪೂರ್ಣವಾಗಿ ಹುಡಿಯಾಗಿದೆ ಮತ್ತು ಅಧಿಕಾರಿಗಳು ಕಳ್ಳಸಾಗಣೆ ಮಾಡಿದ ಚಿನ್ನವನ್ನು ಸಾಗಿಸುತ್ತಿದ್ದ ಅಪರಾಧಿಗಳ ಕಾರನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಕಾರಿನಲ್ಲಿದ್ದ ಅಪರಾಧಿಗಳಲ್ಲಿ ಒಬ್ಬನಾದ ಫಜಲ್ ಚಿನ್ನದೊಂದಿಗೆ ಹತ್ತಿರದ ಭತ್ತದ ಗದ್ದೆಗೆ ಓಡಿಹೋಗಿದ್ದು, ನಂತರ ಚಿನ್ನವನ್ನು ಡಿಆರ್ಐ ಅಧಿಕಾರಿಗಳು ವಶಪಡಿಸಿಕೊಂಡರು. ಆದಾಗ್ಯೂ, ಫಜಲ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಕಾರು ಚಾಲನೆ ಮಾಡುತ್ತಿದ್ದ ಇನ್ನೊಬ್ಬ ಅಪರಾಧಿ ನಿಸ್ಸಾರ್ನನ್ನು ಬಂಧಿಸಲಾಗಿದೆ. ಡಿಆರ್ಐ ಅಧಿಕಾರಿಗಳ ಮೇಲೆ ತಮ್ಮ ಕಾರನ್ನು ನುಗ್ಗಿಸಿದ್ದ ಹಿನ್ನೆಲೆಯಲ್ಲಿ ಕೊಂಡೊಟ್ಟಿ ಪೊಲೀಸರು ಇಬ್ಬರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.