ಬೆಂಗಳೂರು: ಗುತ್ತಿಗೆದಾರರೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಎಂಬಾತನನ್ನೇ ಪೊಲೀಸರು ಬಂಧಿಸಿದ್ದಾರೆ. ಗುತ್ತಿಗೆದಾರನನ್ನು ಕಿಡ್ನ್ಯಾಪ್ ಮಾಡಿ 3 ಕೋಟಿ ರೂ. ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜಿ.ಕೆ.ವೆಂಕಟೇಶ್ ಯಶವಂತಪುರ ವಾರ್ಡ್ನ ಮಾಜಿ ಕಾರ್ಪೊರೇಟರ್ ಆಗಿದ್ದು, ಯಶವಂತಪುರ(Yashwantpur) ವಾರ್ಡ್ ನಲ್ಲಿನ ಕಾಮಗಾರಿಯನ್ನು ಗುತ್ತಿಗೆದಾರ ಚಂದ್ರು ಎಂಬಾತ ಪಡೆದಿದ್ದರು. ಆದರೆ, ಚಂದ್ರುಗೆ ಟೆಂಡರ್ ಸಿಕ್ಕಿದ್ದಕ್ಕೆ ವೆಂಕಟೇಶ್ ಸಿಟ್ಟಾಗಿದ್ದ. ಹೀಗಾಗಿ ಅಪಹರಿಸಿ, ನಿನ್ನಿಂದ ನಷ್ಟ ಆಗಿದ್ದು, ಕಾಮಗಾರಿ ಕೈ ತಪ್ಪಿದೆ. ಅದನ್ನು ಭರಿಸುವಂತೆ ಬೆದರಿಕೆ ಇಟ್ಟಿದ್ದ ಎನ್ನಲಾಗಿದೆ. 3 ಕೋಟಿ ರೂ. ಚೆಕ್ ಪಡೆದು ಹಲ್ಲೆ ಮಾಡಿ ಬಿಡುಗಡೆ ಮಾಡಲಾಗಿತ್ತು. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಗೆ ಗುತ್ತಿಗೆದಾರ ಚಂದ್ರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.