M H Krishnaiah Passed Away | ಹಿರಿಯ ಸಾಹಿತಿ-ವಿಮರ್ಶಕ ಪ್ರೊ.ಎಂ.ಹೆಚ್. ಕೃಷ್ಣಯ್ಯ ಇನ್ನಿಲ್ಲ
ಬೆಂಗಳೂರು : ಪ್ರಸಿದ್ಧ ಸಾಹಿತಿ, ವಿಮರ್ಶಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಹೆಚ್. ಕೃಷ್ಣಯ್ಯ ಇಂದು ವಿಧಿವಶರಾಗಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಯ್ಯ ಅವರು, ರಾಜಾಜಿನಗರದ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಜುಲೈ 21, 1937 ರಂದು ಮೈಸೂರಿನಲ್ಲಿ ಜನಸಿದ್ದ ಕೃಷ್ಣಯ್ಯನವರು, ಮೈಸೂರು ವಿವಿಯಲ್ಲಿ ಎಂ.ಎ ಪದವಿ ಪಡೆದು, ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಸೇರಿದಂತೆ ಹಲವು ಕಾಲೇಜುಗಳಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿದ್ದರು.
ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್.ಎಂ.ಹಡಪದ್, ರೂಪಶಿಲ್ಪಿ ಬಸವಯ್ಯ, ನಾಟಕ ಮತ್ತು ಸೌಂದರ್ಯ ಪ್ರಜ್ಞೆ, ಅವಲೋಕನ, ಎನ್.ಹೆಚ್. ಕುಲಕರ್ಣಿ, ಶೃಂಗಾಯ ಲಹರಿ, ಕಲಾ ದರ್ಶನ, ಬೆಂಗಳೂರು ದರ್ಶನ ಕೃಷ್ಣನವರ ಕೃತಿಗಳಾಗಿವೆ.
ಇನ್ನು ಇವರ ಶೃಂಗಾರ ಲಹರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.
ಕೃಷ್ಣಯ್ಯನವರ ನಿಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದು, ಗಾಯಿತ್ರಿನಗರದ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.