ಬಳ್ಳಾರಿ: ಗಣಿ ಜಿಲ್ಲೆ ಖ್ಯಾತಿಯ ಬಳ್ಳಾರಿಯಲ್ಲಿರುವ ಕೋವಿಡ್ ಜಿಲ್ಲಾಸ್ಪತ್ರೆ ಇದುವರೆಗೂ ಸಾವಿರಾರು ಕೊರೊನಾ ರೋಗಿಗಳ ಜೀವ ಉಳಿಸಿದೆ. ಇಲ್ಲಿರುವ ವೈದ್ಯರ ಶ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಆದರೆ, ಇದೀಗ ಇದೇ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಮೃತಪಟ್ಟ ಬಳಿಕ ಅವರ ಮೈಮೇಲಿನ ಆಭರಣಗಳು ಕಳ್ಳತನವಾಗುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಮಲ್ರ್ಕಾನಯಹಳ್ಳಿಯ ಇಂದ್ರಜಿತ್ ಎಂಬುವವರು ಜಿಲ್ಲಾಸ್ಪತ್ರೆ ಮುಂದೆ ನಿಂತು ತಮ್ಮ ಸಂಬಂಧಿಕರ ಆಭರಣ ಕಳ್ಳತನವಾಗಿರುವ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಡಿದ್ದಾರೆ. ಅಲ್ಲದೆ ವಿಡಿಯೋದಲ್ಲಿ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಇಂಥ ಗಂಭೀರ ಆಪಾದನೆ ಕೇಳಿ ಬಂದಿದೆ. ಕೊಟ್ಟೂರು ತಾಲೂಕಿನ ಮಲ್ಕಾನಯಹಳ್ಳಿಯ ಮಹಿಳೆಗೆ ಆಗಸ್ಟ್.12 ರಂದು ಕೋವಿಡ್ ದೃಢಪಟ್ಟಿತ್ತು. ಕೆಲ ದಿನಗಳ ಕಾಲ ಹೊಸಪೇಟೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಕೋವಿಡ್ ನೆಗೆಟಿವ್ ಕೂಡ ಬಂದಿತ್ತು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಾಣದ ಪರಿಣಾಮ ಬಳ್ಳಾರಿಯ ಕೋವಿಡ್ ಜಿಲ್ಲಾಸ್ಪತ್ರೆಗೆ ಆ.27 ರಂದು ದಾಖಲಿಸಲಾಗಿತ್ತು. ಆದರೆ, ಇಲ್ಲಿಯೂ ಚಿಕಿತ್ಸೆ ಫಲಿಸದೇ ಆ.28 ರಂದು ರೋಗಿ ಮೃತಪಟ್ಟಿದ್ದರು.
ಈ ವೇಳೆ ಕೋವಿಡ್ ರಿಪೋರ್ಟ್ ನೆಗಟಿವ್ ಬಂದಿದ್ದರಿಂದ ಶವದ ಹಸ್ತಾಂತರವನ್ನು ಕುಟುಂಬಸ್ಥರಿಗೆ ಮಾಡಲಾಗಿತ್ತು. ಆದರೆ, ಈ ವೇಳೆ ಶವ ಕೊಡುವಾಗ ದೇಹದಲ್ಲಿದ್ದ ಚಿನ್ನಾಭರಣಗಳು ಕಳ್ಳತನವಾಗಿವೆ. ಕೊರಳಲ್ಲಿದ್ದ ಚಿನ್ನದ ಸರ, ಕಿವಿಯಲ್ಲಿದ್ದ ಓಲೆಯನ್ನು ಆಸ್ಪತ್ರೆ ಸಿಬ್ಬಂದಿ ಕೇಳಿದರೇ ಕೊಡುತ್ತಿಲ್ಲ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಕೋವಿಡ್ ರೋಗಿಗಳ ಮೇಲಿನ ಆಭರಣವನ್ನು ಸಿಬ್ಬಂದಿ ತೆಗೆದುಕೊಂಡಿರುವುದಿಲ್ಲ. ಅವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಅವರನ್ನು ನಮ್ಮನ್ನು ಸಂಪರ್ಕಿಸಲು ಹೇಳಿ, ಸಮಸ್ಯೆ ಬಗೆಹರಿಸುತ್ತೇವೆ ಎಂದು ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ ಹೇಳಿದ್ದಾರೆ.
ಒಟ್ಟಾರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸತ್ತ ಹೆಣಗಳ ಮೇಲಿನ ಆಭರಣಗಳು ಕಳ್ಳತನವಾಗುತ್ತಿವೆ ಎನ್ನುವುದು ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.