ಹಾಸನ: ವೇದಿಕೆ ಮೇಲೆಯೇ ಶಾಸಕರಿಬ್ಬರು ವಾಗ್ವಾದ ನಡೆಸಿರುವ ಘಟನೆ ನಡೆದಿದೆ.
ಮದ್ಯದಂಗಡಿ ಲೈಸೆನ್ಸ್ ವಿವಾದದ ಕುರಿತು ಶಾಸಕ ಕೆ.ಎಂ ಶಿವಲಿಂಗೇಗೌಡ (K M Shivalinge Gowda) ಹಾಗೂ ಎಚ್.ಕೆ ಸುರೇಶ್ (H.K Suresh) ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ (KN Rajanna) ಶಾಕ್ ಆಗಿದ್ದಾರೆ.
ಕರಗುಂದ ಗ್ರಾಮದಲ್ಲಿ ಮದ್ಯದಂಗಡಿ ತೆರೆದು ಹೆಣ್ಣುಮಕ್ಕಳ ತಾಳಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ತಮ್ಮ ಭಾಷಣದಲ್ಲಿ ಆರೋಪಿಸಿದ್ದರು. ಉತ್ತರು ನೀಡಲು ಕೆ.ಎಂ.ಶಿವಲಿಂಗೇಗೌಡ ಮುಂದಾಗಿ, ಜನ ಸೇರಿಸುವವನು ನಾನು, ನೀನು 15 ಜನ ಕರೆದುಕೊಂಡು ಬಂದು ಸಭೆ ಹಾಳು ಮಾಡಲು ಬಂದಿದ್ದೀಯಾ ಎಂದು ಶಾಸಕ ಸುರೇಶ್ ವಿರುದ್ಧ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಿವಲಿಂಗೇಗೌಡರ ಮೇಲೆ ಸಿಟ್ಟಾದ ಶಾಸಕ ಎಚ್.ಕೆ.ಸುರೇಶ್, ನನಗೂ ಜಾವಗಲ್ ಗ್ರಾಮ ಸೇರುತ್ತದೆ, ನನಗೂ ಹಕ್ಕಿದೆ ಎಂದು ಆಕ್ರೋಶ ಹೊರಹಾಕಿದರು. ಮದ್ಯದಂಗಡಿ ಓಪನ್ ಮಾಡಿದವನು ಕೆ.ಎಂ.ಶಿವಲಿಂಗೇಗೌಡರ ಸ್ನೇಹಿತ ಎಂದು ಸುರೇಶ್ ಮೈಕ್ನಲ್ಲಿ ಹೇಳಿದರು. ಹೀಗಾಗಿ ಕೋಪಗೊಂಡ ಶಿವಲಿಂಗೇಗೌಡ, ಓವರ್ ಆಗಿ ಆಡಬೇಡ. ನಮ್ಮ ಸರ್ಕಾರ ಬಂದು ಐದು ತಿಂಗಳು ಆಯ್ತು ಒಂದು ಮದ್ಯದಂಗಡಿಗೂ ಅನುಮತಿ ನೀಡಿಲ್ಲ. ಕಳೆದ ಸರ್ಕಾರವೇ ನೀಡಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ಬೆಂಬಲಿಗರೂ ಜೈಕಾರ ಕೂಗಿದರು. ನಂತರ ಕೆ.ಎನ್.ರಾಜಣ್ಣ ತಿಳಿಗೊಳಿಸಿದರು.