ದೆಹಲಿ: ದೆಹಲಿ ಅಬಕಾರಿ ನೀತಿ ವಿಷಯದಲ್ಲಿ ಇಡಿ ಬಂಧನದಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಕೇಜ್ರಿವಾಲ್ ವಿರುದ್ಧ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಗಂಭೀರ ಆರೋಪ ಮಾಡಿದ್ದಾನೆ. ಖಲಿಸ್ತಾನ್ ಪ್ರತ್ಯೇಕತಾವಾದಿ ಗುಂಪುಗಳಿಂದ ಆಮ್ ಆದ್ಮಿ 16 ಮಿಲಿಯನ್ ಅಮೆರಿಕನ್ ಡಾಲರ್ ಹಣ ಪಡೆದಿದೆ ಎಂದು ಪನ್ನು ಆರೋಪಿಸಿದ್ದಾರೆ.
2014 ರಿಂದ 2022ರ ನಡುವೆ ಈ ಹಣ ವರ್ಗಾವಣೆ ನಡೆದಿದೆ ಎಂದು ಈಗಾಗಲೇ ಪನ್ನು ಹೇಳಿದ್ದಾನೆ. ಜೈಲು ಶಿಕ್ಷೆಗೆ ಗುರಿಯಾಗಿರುವ ಖಲಿಸ್ತಾನಿ ಉಗ್ರ ದೇವೇಂದರ್ ಪಾಲ್ ಸಿಂಗ್ ಭುಲ್ಲಾರ್ನನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದಿರೋದಾಗಿ ಆತ ಆರೋಪಿಸಿದ್ದಾನೆ.
ಭಾರತೀಯ ಮೂಲದವನಾದ ಗುರುಪತ್ವಂತ್ ಸಿಂಗ್ ಪನ್ನು, ಅಮೆರಿಕ ಹಾಗೂ ಕೆನಡಾ ಎರಡೂ ದೇಶಗಳ ಪೌರತ್ವ ಹೊಂದಿದ್ದಾನೆ. ಖಲಿಸ್ತಾನ್ ಪರ ನಿಲುವು ಹೊಂದಿ, ಕುಖ್ಯಾತನಾಗಿದ್ದಾನೆ.
ಅಬಕಾರಿ ನೀತಿ ರೂಪಿಸಿದ್ದ ದೆಹಲಿ ಸರ್ಕಾರ, ತೀವ್ರ ಆಕ್ರೋಶದ ಬೆನ್ನಲ್ಲೇ ನೀತಿ ಹಿಂಪಡೆದಿತ್ತು. ಇದರಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿಯುತ್ತಿದ್ದಂತೆ ಸಿಬಿಐ ತನಿಖೆ ಆರಂಭಿಸಿತ್ತು. ಡಿಸಿಎಂ ಮನೀಶ್ ಸಿಸೋಡಿಯಾ ಬಳಿಕ ಇದೀಗ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಈಗ ಕೇಜ್ರಿವಾಲ್ ಗೆ ಮತ್ತಷ್ಟು ಸಂಕಷ್ಟ ಶುರುವಾಗಿದೆ.