Pratap Simha | ದೇವನೂರು ಮಹಾದೇವ ಅವರದ್ದು ಕೃತಿಯಲ್ಲ ವಿಕೃತಿ
ಮೈಸೂರು : ದೇವನೂರು ಮಹಾದೇವ ಅವರದ್ದು ಕೃತಿಯಲ್ಲ ವಿಕೃತಿ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ದೇವನೂರು ಮಹಾದೇವ ಅವರ RSS ಆಳ ಮತ್ತು ಅಗಲ ಪುಸ್ತಕದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಂಸದರು, ಕಾಂಗ್ರೆಸ್ ಗೆ ಆಳಾಗಿ ಬರೆಯುವವರಿಗೆ RSSನ ಆಳ ಅಗಲ ತಿಳಿದುಕೊಳ್ಳಲು ಸಾಧ್ಯವಿಲ್ಲ. ಒಂದು ಪಕ್ಷದ ಆಳಾಗಿ ಬರೆದಿದ್ದಾರೆ. ಕುಸುಮ ಬಾಲೆ ನಂತರ ದೇವನೂರು ಮಹಾದೇವ ಅವರಲ್ಲಿ ಒಂದಷ್ಟು ಸೃಜನ ಶೀಲತೆ ಉಳಿದುಕೊಂಡಿದೆ ಎಂದು ಕೊಂಡಿದ್ದೆ. ಆದರೆ ಅಷ್ಟೇ RSS ಆಳ ಅಗಲ ಪುಸ್ತಕ ಬರೆಯಲು ಹೋಗಿ ಅವರ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಚತುರ್ವರ್ಣ ಪದ್ಧತಿ ಬಗ್ಗೆ ಬರೆಯಲು ಹೋಗಿದ್ದಾರೆ. ಒಂದು ಧರ್ಮ, ಒಬ್ಬ ನಾಟಕ, ಒಂದು ದೇಶವನ್ನ ಆರ್ ಎಸ್ ಎಸ್ ಪ್ರತಿಪ್ರಾದಿಸುತ್ತದೆ ಎಂದು ಬರೆದಿದ್ದಾರೆ. ಆದರೆ ಒಬ್ಬ ವ್ಯಕ್ತಿ ಒಂದು ಪುಸ್ತಕ ಒಂದು ದೇಶದಿಂದ ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ದೇವನೂರು ಮಹಾದೇವ ಯಾಕೆ ಮಾತನಾಡಲ್ಲ ಎಂದು ಪ್ರಶ್ನಿಸಿದ್ದಾರೆ.

ಚತುರ್ ವರ್ಣ ಪದ್ಧತಿ ಕೇವಲ ಹಿಂದೂ ಧರ್ಮದಲ್ಲಿಲ್ಲ. ಕ್ರಿಶ್ಚಿಯನ್ ಧರ್ಮದಲ್ಲೂ ಖ್ಯಾತಲೀಕ್ ಪ್ರಾಟಸ್ಟೆಂಟ್, ನಿಗ್ರೋ ಮುಂತಾದ ಪಂಥಗಳಿವೆ. ಇಸ್ಲಾಂ ಧರ್ಮದಲ್ಲೂ ಸುನ್ನಿ, ಸಿಯಾ, ಪಠಾಣ್, ಮೊಗಲ್ ಜಾತಿಗಳಿವೆ. ಚತುರ್ವರ್ಣ ವಿರೋಧಿಸುವುದಾದರೆ ಎಲ್ಲಾ ಧರ್ಮಗಳ ಬಗ್ಗೆಯೂ ಮಾತನಾಡಿ ಎಂದಿದ್ದಾರೆ.
ಅಂಬಾನಿ, ಅದಾನಿ ಆದಾಯ ಜಾಸ್ತಿಯಾಗಿದೆ, ಬ್ಯಾಂಕ್ ಗಳ ಸಾಲ ರೈಟ್ ಆಫ್ ಬಗ್ಗೆ ಏನೇನೋ ಬರೆದಿದ್ದಾರೆ. ಇದೆಲ್ಲವನ್ನ ಗಮನಿಸಿದರೆ, ಒಬ್ಬ ಕಾಂಗ್ರೆಸ್ ನ ಕಾರ್ಯಕರ್ತ ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತನಾಗಿ ಬರೆದು ಸಿದ್ದರಾಮಯ್ಯ ಅವರು ದೇವನೂರು ಮಹದೇವ್ ಜೊತೆ ಮಾತನಾಡಿ ಅವರ ಹೆಸರನ್ನ ಹಾಕಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.