ಐಪಿಲ್ 16ನೇ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ.
ಈ ಮೂಲಕ ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ತಂಡಗಳ ಸಾಲಿನಲ್ಲಿ ಚೆನ್ನೈ, ಮುಂಬಯಿ ಇಂಡಿಯನ್ಸ್ ಜೊತೆ ಸ್ಥಾನ ಪಡೆದುಕೊಂಡಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ ಸಿಎಸ್ ಕೆ 5 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.
ಐಪಿಎಲ್ 2023 ಟೂರ್ನಿ ಆರಂಭವಾದಾಗಿನಿಂದ ಇದು ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿತ್ತು. ಈ ಕುರಿತು ಧೋನಿ ಬಳಿ ಕೇಳಿದಾಗ ಸ್ಪಷ್ಟ ಉತ್ತರ ಬಂದಿರಲಿಲ್ಲ. ಸದ್ಯ ಫೈನಲ್ ಪಂದ್ಯ ಮುಗಿದ ನಂತರ ಎಲ್ಲ ಗೊಂದಲಗಳಿಗೆ ಧೋನಿ ತೆರೆ ಎಳೆದಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಸರಿಯಾದ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದ್ದಾರೆ.. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ, ಆದರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೇಹಕ್ಕೆ ಸುಲಭವಾಗುವುದಿಲ್ಲ. ಆದರೆ, ಅಭಿಮಾನಿಗಳಿಗೆ ನನ್ನಿಂದ ಉಡುಗೊರೆಯಾಗಲಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹೀಗಾಗಿ ಡಗೌಟ್ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ ಎಂದು ಧೋನಿ ಭಾವುಕರಾಗಿ ನುಡಿದಿದ್ದಾರೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೆ ಅದಕ್ಕೆ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಹೇಳಿದ್ದಾರೆ.