ಬೆಂಗಳೂರು : ಮಕ್ಕಳ ಆನ್ ಲೈನ್ ಪಾಠಕ್ಕಾಗಿ ಗದಗ ಜಿಲ್ಲೆಯ ತಾಯಿಯೊಬ್ಬರು ತಾಳಿಯನ್ನೇ ಅಡವಿಟ್ಟು ಟಿ.ವಿ ಖರೀದಿಸಿದ ಸಂಗತಿ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಸಮಾಜ ಮತ್ತು ಸರ್ಕಾರ ಎಚ್ಚರ ವಹಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, “ಕೊರೊನಾ ಸೋಂಕು ಜನರ ಜೀವ-ಜೀವನದ ಜೊತೆ ಮಾತ್ರ ಚೆಲ್ಲಾಟ ಮಾಡುತ್ತಿಲ್ಲ. ಇಡೀ ಮನುಕುಲದ ರೀತಿ-ರಿವಾಜುಗಳನ್ನು ಬುಡಮೇಲು ಮಾಡುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ತಾಯಿ ಒಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ”
“ನಾಲ್ಕು ಮಕ್ಕಳ ಪೈಕಿ 7 ಮತ್ತು 8 ನೇ ತರಗತಿ ಓದುತ್ತಿರುವ ಇಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಮನೆಯಲ್ಲಿ ಟಿವಿ ಇಲ್ಲದ ಕಾರಣ ತಾಳಿಯನ್ನು ಅಡವಿಟ್ಟು ನರಗುಂದ ತಾಲೂಕಿನ ರಡ್ಡೇರ ನಾಗನೂರು ಗ್ರಾಮದ ಕಸ್ತೂರಿ ಎಂಬ ಮಹಾತಾಯಿ ದುಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದಿವೆ”.
“ಇಂತಹ ನೂರಾರು ನಿದರ್ಶನಗಳು ಸದ್ದಿಲ್ಲದೆ, ಸುದ್ದಿಯಾಗದೆ ಬಡ ಪೋಷಕರು ಕೊರೋನಾ ಕಾಲದಲ್ಲಿ ಯಮಯಾತನೆ ಅನುಭವಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಸಮಾಜ ಮತ್ತು ಸರ್ಕಾರ ಎಚ್ಚರ ವಹಿಸಬೇಕಿದೆ” ಎಂದು ಒತ್ತಾಯಿಸಿದ್ದಾರೆ.
“ಆನ್ಲೈನ್ ಶಿಕ್ಷಣದ ಅಪಾಯ ಮತ್ತು ಬಡ ಪೋಷಕರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಕ್ಷಣವೇ ಸಮಗ್ರ ಯೋಜನೆಯೊಂದನ್ನು ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸುತ್ತೇನೆ” ಎಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಎನಗೆ ಮನೆ ಇಲ್ಲ , ಎನಗೆ ಧನವಿಲ್ಲ , ಮಾಡುವದೇನು? ನೀಡುವದೇನು? ಮನೆ ಧನ ಸಕಲ ಸಂಪದ ಸೌಖ್ಯವುಳ್ಳ. ನಿಮ್ಮ ಶರಣರ ತಪ್ಪಲಕ್ಕಿಯ ತಂದು, ಎನ್ನೊಡಲ ಹೊರೆವೇನಾಗಿ, ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನ ಬಸವಣ್ಣಾ” ಎಂದು ಬರೆದುಕೊಂಡಿದ್ದಾರೆ.