ಬೆಂಗಳೂರು: ನಾದಿನ ಮೇಲೆ ಕಣ್ಣಾಕಿ ಬಾವನೊಬ್ಬ ಹೆಣವಾಗಿರುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವ್ಯಾಪ್ತಿಯಲ್ಲಿ ನಡೆದಿದೆ.
ಮೊಹಮದ್ ಅಖ್ತರ್ ಅಲಿ (44) ಕೊಲೆಯಾದ ದುರ್ದೈವಿ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆಯ ಜುಮ್ಮಾ ಮಸೀದಿ ಹತ್ತಿರದಿಂದ ಈತನನ್ನು ಆತನ ಕಾರಿನಲ್ಲಿಯೇ ಅಪಹರಿಸಲಾಗಿತ್ತು. ಆತನ ಕತ್ತು ಬಿಗಿದು ಕೊಲೆ ಮಾಡಿ ಹೊಸಕೋಟೆ ಹತ್ತಿರದ ಕಾಲುವೆಯಲ್ಲಿ ಶವ ಎಸೆದಿದ್ದಾರೆ. ನಂತರ ಕೃತ್ಯಕ್ಕೆ ಬಳಸಿದ್ದ ಕಾರನ್ನು ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಅಕ್ತರ್ ಅಲಿ ಪತ್ನಿ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ಹೀಗಾಗಿ ತನಿಖೆ ಕೈಗೊಂಡ ಪೊಲೀಸರು ಈ ವಿಷಯ ಬಯಲು ಮಾಡಿದ್ದಾರೆ. ಹತ್ಯೆಯಾದ ಮೊಹಮ್ಮದ್ ಅಖ್ತರ್ ಅಲಿಗೆ ಆತನ ನಾದಿನಿಯೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗಿದೆ. ಹೀಗಾಗಿ ನಾದಿನಿಯ ಪತಿ ಷಹನವಾಜ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಹಲಸೂರು ಗೇಟ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ಸುಪಾರಿ ನೀಡಿದ್ದ ನಾದಿನಿಯ ಗಂಡ ಷಹನವಾಜ್ ಸೇರಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.