ರಾಜ್ಯದ ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರ್ಯರ ಕೊಡುಗೆ ಅಪಾರ: ಸಚಿವ ನಾರಾಯಣಗೌಡ Saaksha Tv
ಮಂಡ್ಯ: ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರ್ಯರ ಕೊಡುಗೆ ಅಪಾರವಾಗಿದೆ. ಬೇಲೂರು ಹಳೇಬೀಡು ದೇವಾಲಯಗಳನ್ನು ತಮ್ಮ ವೃತ್ತಿ ಕೌಶಲ್ಯದ ಮೂಲಕ ನಿರ್ಮಿಸಿ ವಿಶ್ವವಿಖ್ಯಾತಗೊಳಿಸಿರುವ ಜಕಣಾಚಾರ್ಯರು ನಮ್ಮ ರಾಜ್ಯದ ಹೆಮ್ಮೆಯಸಂಗತಿ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಯ್ಸಳ ದೇವಾಲಯಗಳ ಕೊಡುಗೆ ಅಪಾರ ಎಂದು ಸಚಿವ ನಾರಾಯಣಗೌಡ ಮಾತನಾಡಿದರು.
ನಗರದ ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಜಕಣಾಚಾರ್ಯರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ, ಜಕಣಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ, ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ, ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಆದರೆ ಅಮರ ಶಿಲ್ಪಿಗಳಾದ ಜಕಣಾಚಾರ್ಯರ ಶಿಲ್ಪಕಲಾ ಕೆತ್ತನೆಯ ಸೊಬಗು ಎಂದೆಂದಿಗೂ ಅಮರವಾಗಿ ಉಳಿದಿದೆ ಎಂದು ಸ್ಮರಿಸಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ವಿಶ್ವಕರ್ಮ ಭವನದ ನಿರ್ಮಾಣಕ್ಕೆ ಸುಸಜ್ಜಿತವಾದ ನಿವೇಶನವನ್ನು ಒದಗಿಸಿ ರಾಜ್ಯ ಸರ್ಕಾರದಿಂದ ಒಂದುಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ ಸಚಿವರು. ಇದೆ ಸಮಯದಲ್ಲಿ ಮೈಸೂರಿನ ಪಿ.ಎಸ್.ಸಿದ್ಧಾಚಾರ್ ವಿರಚಿತ ಅಮರಶಿಲ್ಪಿ ಐತಿಹ್ಯ ಕಥಾನಕ ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಹಶೀಲ್ದಾರ್ ಎಂ.ವಿ.ರೂಪ ಮಾತನಾಡಿ, ಶಿಲ್ಪಕಲಾ ಕ್ಷೇತ್ರಕ್ಕೆ ಜಕಣಾಚಾರ್ಯರ ಕೊಡುಗೆ ಅಪಾರವಾಗಿದೆ. ಅವರ ವೃತ್ತಿಕೌಶಲ್ಯದ ಮೂಲಕ ಮೂಡಿಬಂದಿರುವ ಸೋಮನಾಥಪುರ, ಬೇಲೂರು-ಹಳೇಬೀಡು ದೇವಾಲಯಗಳು ಇತರೆ ದೇವಾಲಯಗಳಿಗಿಂತ ವಿಭಿನ್ನವಾಗಿದ್ದು ಮಾದರಿಯಾಗಿವೆ ಎಂದರು.
ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪ್ರೆಸ್ ಕುಮಾರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾಜದ ಉನ್ನತಿಗೆ ಸಹಕಾರ ನೀಡುತ್ತಿರುವ ಸಚಿವ ನಾರಾಯಣಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಕುಮಾರ್, ಸದಸ್ಯ ಲೋಕೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ರಾಜಶ್ವನಿರೀಕ್ಷಕಿ ಚಂದ್ರಕಲಾ, ಅಭ್ಕಾರಿ ನಿರೀಕ್ಷಕಿ ಸಿ.ಪಿ.ಭವ್ಯ, ಸಂಗೀತ ಶಿಕ್ಷಕ ವೆಂಕಟೇಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಅಗ್ರಹಾರಬಾಚಹಳ್ಳಿ ರೂಪೇಶ್, ತಾ.ಪಂ ಮಾಜಿಉಪಾಧ್ಯಕ್ಷ ಎಂ.ಎಸ್.ಪುರುಷೋತ್ತಮ, ಅರಳಕುಪ್ಪೆ ರವಿ, ಮಾವಿನಕೆರೆ ಅನುಸೂಯ ಸೇರಿದಂತೆ ನೂರಾರು ಜನರು ಜಕಣಾಚಾರ್ಯರ ಸಂಸ್ಮರಣೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.