ಕಲಬುರಗಿ: ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಘಟನೆ ವರದಿಯಾಗಿದ್ದು, ಇದೀಗ ನೀಟ್ ಪರೀಕ್ಷೆಯ ವೇಳೆ ಬ್ರಾಹ್ಮಣ ವಿದ್ಯಾರ್ಥಿಯ ಪವಿತ್ರ ಜನಿವಾರ ತೆಗೆಸಿದ ಪ್ರಕರಣ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಎಂಬುವವರು ಪರೀಕ್ಷಾ ಕೇಂದ್ರ ಪ್ರವೇಶದ ವೇಳೆ ಅಧಿಕಾರಿಗಳಿಂದ ಅಪರಿಚಿತ ವಸ್ತು ಎಂಬ ನೆಪದಲ್ಲಿ ಅವರ ಜನಿವಾರವನ್ನು ತೆಗೆಯಬೇಕೆಂದು ಒತ್ತಡಕ್ಕೆ ಒಳಗಾದರು. ಅದನ್ನು ತೆಗೆದ ಬಳಿಕವಷ್ಟೇ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಈ ಘಟನೆಗೆ ವಿದ್ಯಾರ್ಥಿಯ ಕುಟುಂಬದವರ ಆಕ್ರೋಶದ ನಡುವೆಯೇ ಭಕ್ತ ಸಮೂಹ, ಬ್ರಾಹ್ಮಣ ಸಂಘಟನೆಗಳು ಹಾಗೂ ಸಮಾಜಮುಖಿ ಪ್ರಜ್ಞಾವಂತರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದು ಧರ್ಮದಲ್ಲಿ ಜನಿವಾರವು ಪುರುಷ ಬ್ರಾಹ್ಮಣರಿಗೆ ಪವಿತ್ರವಾಗಿ ಪರಿಗಣಿಸಲ್ಪಡುವ ಕಾರಣ, ಇದನ್ನು ಬಲವಂತವಾಗಿ ತೆಗೆಸುವುದು ಧರ್ಮದ ಅವಮಾನವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಸಿಇಟಿ ಪರೀಕ್ಷೆಯಲ್ಲಿ ಶಿವಮೊಗ್ಗ, ಬೀದರ್ ಹಾಗೂ ಧಾರವಾಡದಲ್ಲಿಯೂ ಇಂತಹ ಘಟನೆಯು ನಡೆದಿದೆ.
ಬೃಹತ್ ವಿವಾದದ ನಡುವೆಯೂ, ಈ ವಿಷಯದ ಬಗ್ಗೆ ಶಾಲಾ ಆಡಳಿತ ಅಥವಾ ಜಿಲ್ಲಾ ಪರೀಕ್ಷಾ ಅಧಿಕಾರಿಗಳಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಆದರೆ ಈ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ರಾಜ್ಯ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಪರೀಕ್ಷಾ ಮಂಡಳಿಯಿಂದ ಸ್ಪಷ್ಟ ನಿಲುವು ನಿರೀಕ್ಷಿಸಲಾಗಿದೆ.
ಈ ಮಧ್ಯೆ, ಹಲವು ಧಾರ್ಮಿಕ ಹಾಗೂ ಸಮಾಜ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ, ಈ ರೀತಿಯ ಧಾರ್ಮಿಕ ಮೌಲ್ಯಗಳನ್ನು ನೋಯಿಸುವ ಕ್ರಮಗಳನ್ನು ತಪ್ಪಿಸಲು ಪರೀಕ್ಷಾ ಮಾರ್ಗಸೂಚಿಗಳನ್ನು ಪುನರ್ ವಿಮರ್ಶೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.