ಹೊಸದಿಲ್ಲಿ, ಮೇ 20 : ಕೇಂದ್ರ ಸರ್ಕಾರ ಜೂನ್ 1ರಿಂದ ನಾನ್ ಎಸಿ ರೈಲು ಸಂಚಾರ ನಡೆಸಲು ನಿರ್ಧರಿಸಿದ್ದು, ರೈಲ್ವೇ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ದೇಶಾದ್ಯಂತ ಜೂನ್ 1ರಿಂದ 200 ನಾನ್ ಎಸಿ ರೈಲುಗಳು ಸಂಚಾರ ಪ್ರಾರಂಭಿಸಲಿದ್ದು, ನಿಗದಿತ ವೇಳಾಪಟ್ಟಿಯಂತೆ ರೈಲುಗಳ ಓಡಾಟ ನಡೆಯಲಿದೆ. ಶೀಘ್ರದಲ್ಲಿ ಆನ್ಲೈನ್ ಬುಕಿಂಗ್ ತೆರೆಯಲ್ಪಡುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಲಾಕ್ ಡೌನ್ ಪರಿಣಾಮದಿಂದ ದೇಶದಾದ್ಯಂತ ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರಿಗಾಗಿ 200 ಶ್ರಮಿಕ್ ರೈಲುಗಳನ್ನು ಓಡಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಮುಂದಿನ ಎರಡು ದಿನಗಳಲ್ಲಿ ಭಾರತೀಯ ರೈಲ್ವೆ, ಶ್ರಮಿಕ್ ವಿಶೇಷ ರೈಲುಗಳ ಸಂಖ್ಯೆಯನ್ನು ದಿನಕ್ಕೆ 400 ಕ್ಕೆ ಹೆಚ್ಚಿಸಲಾಗುತ್ತದೆ. ಎಲ್ಲಾ ವಲಸಿಗರು ತಾವು ಇರುವ ಸ್ಥಳದಲ್ಲಿಯೇ ಇರಬೇಕೆಂದು ಕೋರಲಾಗಿದ್ದು, ಭಾರತೀಯ ರೈಲ್ವೆ ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಮನೆಗೆ ಕಳುಹಿಸಲಿದೆ ಎಂದು ಸಚಿವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ದೇಶದಲ್ಲಿ ಶ್ರಮಿಕ್ ರೈಲುಗಳು ಮಾತ್ರ ಓಡಾಡುತ್ತಿದ್ದು, ಮೇ 1 ರಿಂದ ಇಲ್ಲಿಯ ತನಕ ಸುಮಾರು 1600 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದು, 21.5 ಲಕ್ಷ ಕಾರ್ಮಿಕರನ್ನು ಬೇರೆ ಊರುಗಳಿಂದ ಅವರವರ ಊರಿಗೆ ತಲುಪಿಸಿದೆ. ಉತ್ತರ ಪ್ರದೇಶದಲ್ಲಿ 837 ರೈಲು, ಬಿಹಾರದಲ್ಲಿ 428 ರೈಲು ಮತ್ತು ಮಧ್ಯಪ್ರದೇಶದಲ್ಲಿ 100 ವಿಶೇಷ ರೈಲುಗಳು ಸಂಚರಿಸಿದೆ.
ಆದರೆ ಶ್ರಮಿಕ್ ರೈಲು ಮತ್ತು ವಿಶೇಷ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಪ್ರಯಾಣಿಕರ ರೈಲು ಸಂಚಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಂಚಾರ ಪ್ರಾರಂಭಿಸಿಲ್ಲ.
ಭಾರತೀಯ ರೈಲ್ವೇ ಹೊರಡಿಸಿರುವ ಹೊಸ ಆದೇಶದ ಪ್ರಕಾರ ವಲಸೆ ಕಾರ್ಮಿಕರನ್ನು ವಾಪಸು ಕಳುಹಿಸಲು ಶ್ರಮಿಕ ವಿಶೇಷ ರೈಲುಗಳಿಗೆ ರಾಜ್ಯಗಳ ಅನುಮತಿ ಬೇಕಿಲ್ಲ. ಒಂದು ರಾಜ್ಯ ಕಾರ್ಮಿಕರನ್ನು ವಾಪಸ್ ಕಳಿಸಲು ಪಟ್ಟಿ ನೀಡಿದರೆ ಸಾಕು, ಪಟ್ಟಿ ಕೊಟ್ಟ ರಾಜ್ಯದಿಂದ ರೈಲನ್ನು ಓಡಿಸಲಾಗುತ್ತದೆ ಎಂದು ಭಾರತೀಯ ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.
ಕೇಂದ್ರ ಗೃಹ ಸಚಿವಾಲಯವು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜೊತೆಗಿನ ಸಂಘರ್ಷದ ಬಳಿಕ, ಶ್ರಮಿಕ್ ರೈಲುಗಳ ಸಂಚಾರದ ಕುರಿತು ರೈಲ್ವೆ ಸಚಿವಾಲಯವು ಗೃಹ ಸಚಿವಾಲಯದ ಜತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬಹುದು ಎಂದು ತಿಳಿಸಿದೆ. ಶ್ರಮಿಕ್ ರೈಲುಗಳ ಓಡಾಟಕ್ಕೆ ಸಂಬಂಧಿಸಿ ರಾಜ್ಯ ಸರಕಾರಗಳು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅಲ್ಲದೇ ರಾಜ್ಯ ಸರ್ಕಾರಗಳು ನಿಗದಿತ ರೈಲು ವೇಳಾಪಟ್ಟಿಗೆ ಸರಿಯಾಗಿ ರೈಲು ನಿಲ್ದಾಣ ತಲುಪಲು ಕಾರ್ಮಿಕರಿಗೆ ಬಸ್ ವ್ಯವಸ್ಥೆಯನ್ನು ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಿದ್ದಾರೆ. ರೈಲ್ವೆ ಪ್ರಯಾಣಿಕರ ವಿಶ್ರಾಂತಿ ಸ್ಥಳಗಳಲ್ಲಿ ಸ್ಯಾನಿಟೈಸರ್ ಲಭ್ಯವಿರುವಂತೆ ಮತ್ತು ಆಹಾರ, ನೀರು ಪೂರೈಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಸುರಕ್ಷತೆಗೆ ಅಗತ್ಯವಾದ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲಾಗದೆ ಪ್ರಮುಖ ನಗರಗಳಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಅಂತಹ ಲಕ್ಷಾಂತರ ವಲಸೆ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಅವರವರ ಊರಿಗೆ ವಾಪಸು ಕಳುಹಿಸಲು ಭಾರತೀಯ ರೈಲ್ವೆ ಇಲಾಖೆ ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಊರಿಗೆ ಶ್ರಮಿಕ್ ರೈಲಿನ ಮೂಲಕ ಕಳಿಸುವ ವ್ಯವಸ್ಥೆ ಮಾಡುತ್ತಿದೆ.