ಬಿಜೆಪಿ ಗೆ ಸೇರ್ಪಡೆಯಾದ ಗುಜರಾತ್ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ….
ಗುಜರಾತ್ನ ಖ್ಯಾತ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರುವ ಮುನ್ನ ಹಾರ್ದಿಕ್ ಕೋಬಾ ಪ್ರದೇಶದಿಂದ ಬಿಜೆಪಿ ಕಚೇರಿ ‘ಕಮಲಂ’ವರೆಗೆ ರೋಡ್ ಶೋ ನಡೆಸಿದರು. ಇದಾದ ಬಳಿಕ ಮಧ್ಯಾಹ್ನ 12.39ರ ವಿಜಯ ಮುಹೂರ್ತದಲ್ಲಿ ಕಮಲದಲ್ಲಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಸಮ್ಮುಖದಲ್ಲಿ ಕೇಸರಿ ಪಕ್ಷವನ್ನ ಸೇರಿಕೊಂಡರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಬಿಜೆಪಿಗೆ ಸೇರಿಲ್ಲ, ಆದರೆ ಇದು ನನ್ನ ಗೃಹಪ್ರವೇಶ’ ಎಂದು ಹೇಳಿದರು.
ಬಿಜೆಪಿ ಸೇರುವ ಮುನ್ನ ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಯ ಹಿತಾಸಕ್ತಿ, ರಾಜ್ಯದ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಾಮಾಜಿಕ ಹಿತಾಸಕ್ತಿಯೊಂದಿಗೆ ಇಂದಿನಿಂದ ಹೊಸ ಅಧ್ಯಾಯ ಆರಂಭಿಸಲಿದ್ದೇನೆ. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸೇವೆ ಮಾಡುವ ಕೆಲಸದಲ್ಲಿ ನಾನು ಸಣ್ಣ ಸೈನಿಕನಾಗಿ ಕೆಲಸ ಮಾಡುತ್ತೇನೆ ಎಂದು ಬರೆದಕೊಂಡಿದ್ದಾರೆ.
ಬಿಜೆಪಿ ಸೇರುವ ಮುನ್ನ ಪೂಜೆ
ಹಾರ್ದಿಕ್ ಪಕ್ಷ ಸೇರುವ ಮುನ್ನ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು, ಅದರಲ್ಲಿ ಬಿಜೆಪಿಗೆ ಸೇರುವ ಸಮಯವನ್ನೂ ಹೇಳಲಾಗಿತ್ತು. ಇದಕ್ಕೂ ಮುನ್ನ ತಮ್ಮ ನಿವಾಸದಲ್ಲಿ ದುರ್ಗಾ ಪಾರಾಯಣ ಮಾಡಿದರು. ದುರ್ಗಾ ಪೂಜೆಯ ನಂತರ, ಹಾರ್ದಿಕ್ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಹೋಗಿ ಅಲ್ಲಿ ಅವರು ಹಸುವಿನ ಪೂಜೆಯನ್ನ ಕೈಗೊಂಡರು.
ಮೇ 17 ರಂದು ರಾಜೀನಾಮೆ ನೀಡಿದರು
ಬಹಳ ದಿನಗಳಿಂದ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಹಾರ್ದಿಕ್ ಮೇ 17ರಂದು ಟ್ವಿಟರ್ ನಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ರಾಜೀನಾಮೆ ನೀಡಿದ ಬಳಿಕ ನಿರಂತರವಾಗಿ ಬಿಜೆಪಿಯ ಕಾರ್ಯವೈಖರಿಯನ್ನು ಶ್ಲಾಘಿಸುತ್ತಿದ್ದ ಅವರು ತಮ್ಮನ್ನು ಹಿಂದುತ್ವದ ಬೆಂಬಲಿಗರೆಂದು ಕರೆದುಕೊಳ್ಳುತ್ತಿದ್ದರು. ಅಂದಿನಿಂದ ಅವರು ಬಿಜೆಪಿ ಸೇರುವ ಸಾಧ್ಯತೆ ಬಗ್ಗೆ ಮಾತನಾಡಲಾಗುತ್ತಿತ್ತು.