ಓಪನ್ ಜೀಪ್ ನಲ್ಲಿ ಮೆರವಣಿಗೆಯಲ್ಲಿ ಸಾಗಿದಾಗ ನಾನು ಅಮಿತಾಬ್ ಬಚ್ಚನ್ ಅಂತ ಭಾಸವಾಗಿತ್ತು… ಮಹಮ್ಮದ್ ಕೈಫ್
ಮಹಮ್ಮದ್ ಕೈಫ್.. ಟೀಮ್ ಇಂಡಿಯಾದ ಮಾಜಿ ಆಟಗಾರ. ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದ ಮಹಮ್ಮದ್ ಕೈಫ್ ವಿಶ್ವ ಕ್ರಿಕೆಟ್ ನ ಶ್ರೇಷ್ಠ ಫೀಲ್ಡರ್ಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮೈದಾನದಲ್ಲಿ ಎದ್ದು ಬಿದ್ದು ಕ್ಷೇತ್ರ ರಕ್ಷಣೆ ಮಾಡುವ ಮಹಮ್ಮದ್ ಕೈಫ್ ಬ್ಯಾಟಿಂಗ್ ನಲ್ಲೂ ಮಿಂಚು ಹರಿಸುತ್ತಿದ್ದರು.
ಅದ್ರಲ್ಲೂ 2002ರ ನ್ಯಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯವನ್ನಂತೂ ಮರೆಯೋಕೆ ಸಾಧ್ಯವಿಲ್ಲ. ಅಂತಹ ಅವಿಸ್ಮರಣೀಯ ಪಂದ್ಯವೊಂದನ್ನು ಮಹಮ್ಮದ್ ಕೈಫ್ ನೆನಪು ಮಾಡಿಕೊಂಡು ಅದಕ್ಕೆ ಅಕ್ಷರ ರೂಪ ಕೊಟ್ಟಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ನ ವಿಶೇಷ ಅಂಕಣದಲ್ಲಿ ಮಹಮ್ಮದ್ ಕೈಫ್ ಅವರು ನ್ಯಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯ ಮತ್ತು ಅನಂತರದ ಸಂಭ್ರಮಾಚರಣೆಯನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.
ಲಾಡ್ಸ್ ್ ಮೈದಾನದಲ್ಲಿ ನಡೆದಿದ್ದ ನ್ಯಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯವನ್ನು ನೆನಪಿಸಿಕೊಂಡಾಗ ನನಗೆ ಮೊದಲು ನೆನಪಾಗೋದೇ ಇದು. ನಾನು ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಹೋಗುತ್ತಿರುವಾಗ ಪ್ರೇಕ್ಷಕರು ಕೂಡ ಕ್ರೀಡಾಂಗಣದಿಂದ ಹೊರಗಡೆ ಹೋಗುತ್ತಿದ್ದರು. ಮೈದಾನದಲ್ಲಿದ್ದ ಪ್ರೇಕ್ಷಕರು ಅಂದುಕೊಂಡಿದ್ದರು ಪಂದ್ಯ ಮುಗಿದೇ ಹೋಯ್ತು ಅಂತ. ಯಾಕಂದ್ರೆ ಸಚಿನ್ ಔಟಾಗಿದ್ದರು. ಹಾಗೇ ಪ್ರೇಕ್ಷಕರಂತೆ ನನ್ನ ಕುಟುಂಬದ ಸದಸ್ಯರೂ ಅದೇ ರೀತಿ ಮಾಡಿದ್ದರು. ಪಂದ್ಯದಲ್ಲಿ ಇನ್ನೂ ಗೆಲ್ಲುವುದು ಅಸಾಧ್ಯ ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿಯೇ ಅಲಹಬಾದ್ನಲ್ಲಿ ನನ್ನ ಮನೆಯ ಪಕ್ಕದಲ್ಲೇ ಇದ್ದ ಥಿಯೇಟರ್ಗೆ ನನ್ನ ತಂದೆ ಹಾಗೂ ಕುಟುಂಬದವರು ದೇವದಾಸ್ ಸಿನಿಮಾ ನೋಡಲು ಹೋಗಿದ್ರು. ತಲೆಕೆಡಿಸಿಕೊಳ್ಳಬೇಡಿ. ನಾನು ಅದನ್ನು ಮರೆತಿದ್ದೇನೆ ಅಂತ ಮಹಮ್ಮದ್ ಕೈಫ್ ಹೇಳಿದ್ದಾರೆ.
ಇನ್ನು ನಾಸೀರ್ ಹುಸೇನ್ ಅವರನ್ನು ಮರೆಯಲು ಹೇಗೆ ಸಾಧ್ಯ… ! ಯಾಕಂದ್ರೆ ನಾಸೀರ್ ಹುಸೇನ್ ನನ್ನನ್ನು ಸ್ಲೆಡ್ಜಿಂಗ್ ಮಾಡಿದ್ದರು. ನಾನೊಬ್ಬ ಬಸ್ ಡ್ರೈವರ್ ಅಂತ. ಇದು ನನಗೆ ಸ್ವಲ್ಪ ತಡವಾಗಿ ಅರ್ಥವಾಗಿಬಿಟ್ಟಿತ್ತು. ನಾನು ಕವರ್ಸ್ನಲ್ಲಿ ಫೀಲ್ಡಿಂಗ್ ಮಾಡುತ್ತಿರುವುದರಿಂದ ಬ್ಯಾಟ್ಸ್ಮೆನ್ಗಳನ್ನು ಗುರಿಯಾಗಿರಿಸಿಕೊಂಡು ಹೆಚ್ಚು ಮಾತನಾಡುತ್ತಿದ್ದೆ, ಇದೇ ರೀತಿ ಹಿಂದೊಮ್ಮೆ ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಗೂ ಇದೇ ಮಾಡಿದ್ದೆ. ಇನ್ನು ನಾಸೀರ್ ಹುಸೇನ್ ಇಂಗ್ಲೆಂಡ್ ತಂಡಕ್ಕೆ ಹೊಸ ಆಯಾಮ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದರು. ಅದಕ್ಕೆ ತಕ್ಕಂತೆ ಅವರು ಶತಕ ಕೂಡ ಸಿಡಿಸಿದ್ರು. ಹಾಗೇ ಪಂದ್ಯವನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲೂ ಇದ್ರು, ಆದ್ರೆ ನಾನು ನಾಸೀರ್ ಹುಸೇನ್ಗೆ ತಿರುಗೇಟು ನೀಡುವ ಹಠದಲ್ಲಿದ್ದೆ. ಪಂದ್ಯದ ಗೆಲುವಿನ ನಂತರ ನಾನು ನಾಸೀರ್ ಹುಸೇನ್ಗೆ ಈ ರೀತಿ ಹೇಳಿದ್ದೆ.. ಬಸ್ ಡ್ರೈವರ್ ಪರವಾಗಿಲ್ಲ ಅಲ್ವಾ ಅಂತ… ಹೀಗೆ ಮಹಮ್ಮದ್ ಕೈಫ್ ನಾಸೀರ್ ಹುಸೇನ್ ಜೊತೆಗಿನ ಮಾತಿನ ಸಮರವನ್ನು ನೆನಪಿಸಿಕೊಂಡಿದ್ದಾರೆ.
ದೊಡ್ಡ ಮೊತ್ತದ ಸವಾಲನ್ನು ಬೆನ್ನಟ್ಟಬೇಕಾಗಿರುವುದರಿಂದ ಡ್ರೆಸಿಂಗ್ ರೂಂನ ವಾತಾವರಣವೂ ಅಷ್ಟೊಂದು ಚೆನ್ನಾಗಿರಲಿಲ್ಲ. ಆ ದಿನಗಳಲ್ಲಿ ಬೃಹತ್ ಮೊತ್ತದ ಸವಾಲನ್ನು ಬೆನ್ನಟ್ಟುವಾಗ ನಾವು ಎಡವಿ ಬೀಳುತ್ತಿದ್ದೇವು. ಅದೇ ರೀತಿ ಹೇಗೆ ಬೆನ್ನಟ್ಟಬೇಕು ಎಂಬುದು ಸಹ ಅಷ್ಟೊಂದು ತಿಳಿದಿರಲಿಲ್ಲ. ಆದ್ರೂ ನಾವು ಗೆಲ್ಲಬೇಕು ಅನ್ನೋ ಭಾವನೆ ಇತ್ತು. ಆಗ ಜಾನ್ ರೈಟ್ ನಮ್ಮ ಕೋಚ್ ಆಗಿದ್ದರು. ಆಟಗಾರರ ಮೀಟಿಂಗ್ ಕೂಡ ನಡೆಯಿತ್ತು. ನಾಯಕ ಸೌರವ್ ಗಂಗೂಲಿ ಈ ವೇಳೆ ಮಾತನಾಡಿದ್ದರು. ಯಾರು ಆತಂಕಪಡಬೇಡಿ. ನಾವು ಉತ್ತಮ ಆರಂಭ ಪಡೆಯೋಣ. ಆಮೇಲೆ ನೋಡೋಣ ಅಂತ ಹೇಳಿದ್ದರು. ಅದಕ್ಕೆ ತಕ್ಕಂತೆ ಗಂಗೂಲಿ ಮತ್ತು ಸೆಹ್ವಾಗ್ ಬ್ಯಾಟಿಂಗ್ ಮಾಡಿದ್ದರು. ಮೊದಲ ವಿಕೆಟ್ಗೆ 106 ರನ್ ಕೂಡ ಪೇರಿಸಿದ್ದರು. ಗಂಗೂಲಿ 60 ರನ್ ಗಳಿಸಿದ್ರೆ, ಸೆಹ್ವಾಗ್ 45 ರನ್ ಸಿಡಿಸಿದ್ರು. ಆನಂತರ ದಿನೇಶ್ ಮೋಗಿಯಾ 9, ಸಚಿನ್ 14, ದ್ರಾವಿಡ್ 5 ರನ್ ಗಳಿಸಿ ಪೆವಿಲಿಯನ್ಗೆ ಹಿಂತಿರುಗಿದ್ದರು.
ನಾನು ಆಗ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೆ. 24 ಓವರ್ಗಳಲ್ಲಿ 189 ರನ್ಗಳು ಬೇಕಾಗಿದ್ದವು. ಯುವರಾಜ್ ಸಿಂಗ್ ಮತ್ತು ನನಗೆ ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೇವು. ನಾವು ಭಾರತ ಕಿರಿಯರ ತಂಡದಲ್ಲೂ ಜೊತೆಯಾಗಿ ಆಡಿದ್ದೇವು. ನಮ್ಮ ನಡುವೆ ಉತ್ತಮ ಹೊಂದಾಣಿಕೆ ಇತ್ತು. ನಾವು ರನ್ಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾನು ನನ್ನ ಆಟವನ್ನು ಆಡುತ್ತಿದ್ದೆ. ಯುವರಾಜ್ ಸಿಂಗ್ ಅವರ ಆಟವನ್ನು ಆಡುತ್ತಿದ್ದರು. ನಿಧಾನವಾಗಿ ಪಂದ್ಯ ತಿರುವನ್ನು ಪಡೆದುಕೊಂಡಿತ್ತು ಅಂತಾರೆ ಮಹಮ್ಮದ್ ಕೈಫ್
ಒಂದು ಹಂತದಲ್ಲಿ 72 ಎಸೆತಗಳಲ್ಲಿ 91 ರನ್ ನಮಗೆ ಗೆಲ್ಲಲು ಬೇಕಾಗಿದ್ದವು. ನಾನು ಗಂಗೂಲಿ ಲಾಡ್ರ್ಸ್ ಅಂಗಣದ ಬಾಲ್ಕನಿಯಲ್ಲಿ ನಿಂತು ಸನ್ನೆ ಮಾಡುತ್ತಿರುವುದನ್ನು ನೋಡುತ್ತಿದೆ. ನಾನು ಸಿಂಗಲ್ಸ್ಗೆ ಆಡಬೇಕು. ಯುವಿ ದೊಡ್ಡ ಹೊಡೆತಕ್ಕೆ ಮುಂದಾಗಬೇಕು ಅಂತ ಅವರು ಕೈಸನ್ನೆ ಮಾಡ್ತಾ ಹೇಳ್ತಾ ಇದ್ರು. ಇದು ಪ್ರತಿಯೊಬ್ಬ ನಾಯಕನೂ ಮಾಡುತ್ತಿದ್ದರು. ಅವರು ಯುವ ಆಟಗಾರರನ್ನು ಬೆಂಬಲಿಸುತ್ತಿದ್ದರು. ಆದ್ರೆ ನಾನು ನನ್ನದೇ ಲೋಕದಲ್ಲಿದ್ದೆ. ನಾನು ಹೊಡೆಯುತ್ತಲೇ ಇದ್ದೆ. ಅಲ್ಲದೆ ನನ್ನ ಆಟವನ್ನೇ ಆಡುತ್ತಿದ್ದೆ. ಅಲ್ಲದೆ ನಾನು ಏನು ಎಂಬುದನ್ನು ಇಡೀ ಜಗತ್ತಿಗೆ ತೋರಿಸಬೇಕು ಎಂಬ ಇರಾದೆಯಲ್ಲೂ ಇದ್ದೆ ಅನ್ನುತ್ತಾರೆ ಮಹಮ್ಮದ್ ಕೈಫ್
ಇನ್ನು ಆಲೆಕ್ಸ್ ಟುಡೋರ್ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದೆ. ನಂತರ ಯುವಿಗೆ ತುಸು ಸಿಟ್ಟಿನಲ್ಲೇ ಹೇಳಿದ್ದೆ. ಭಾಯ್ ನಾನು ಆಡಲು ಬಂದಿರೋದು ಅಂತ. ಆದ್ರೆ ಈ ಶಾಟ್ಸ್ ಆಡಲು ನಾನು ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದೆ. ನಾನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಬಿದ್ದಾಗ ನಾನು ಪುಲ್ ಶಾಟ್ಸ್ಗೆ ಹೇಗೆ ಆಡಬೇಕು ಎಂಬುದರ ಬಗ್ಗೆ ಸಾಕಷ್ಟು ಅಭ್ಯಾಸವನ್ನು ಮಾಡಿದ್ದೆ. ಕಾನ್ಪುರದಲ್ಲಿ ಒದ್ದೆಯಾದ ಚೆಂಡಿನಲ್ಲಿ ಅಭ್ಯಾಸ ನಡೆಸಿದ್ದು ಇಲ್ಲಿ ಫಲ ಕೊಟ್ಟಿತ್ತು ಅಂತಾರೆ ಕೈಫ್.
ಈ ಹಂತದಲ್ಲಿ ಯುವರಾಜ್ ಸಿಂಗ್ (69) ಔಟಾದ್ರು. ನನಗೆ ಆಗ ಆಘಾತವಾಗಿತ್ತು. ಕೆಳ ಕ್ರಮಾಂಕದ ಬ್ಯಾಟ್ಸ್ಮೆನ್ಗಳ ಜೊತೆ ಆಡಬೇಕಾಗಿತ್ತು. ಅವರ ಜೊತೆ ಆಡಿರುವಂತಹ ಅನುಭವವೂ ಇರಲಿಲ್ಲ. ಅದೇ ವೇಳೆ ರೋನಿ ಇರಾನಿಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದೆ. ಬಳಿಕ ಹರ್ಭಜನ್ ಸಿಂಗ್ಗೂ ಹೇಳಿದ್ದೆ. ನಿಮ್ಮ ಆಟವನ್ನು ಆಡಿ ಅಂತ. ನಾನು ಯಾರನ್ನೂ ಗೊಂದಲಕ್ಕೀಡು ಮಾಡುತ್ತಿರಲಿಲ್ಲ. ಆದ್ರೆ ಮಹತ್ವದ ಹಂತದಲ್ಲಿ ಭಜ್ಜಿ ನನಗೆ ನೆರವು ನೀಡಿದ್ರು. ಪಾಲ್ ಕಾಲಿಂಗ್ವುಡ್ ಎಸೆತದಲ್ಲಿ ಇನ್ಸೈಡ್ ಎಡ್ಜ್ಗೆ ಆಗಿ ರನ್ ಗಳಿಸಿದ್ದೆ. ಆಗ ಭಜ್ಜಿ ನೀನು ಏನು ಮಾಡುತ್ತಿದ್ದೀಯಾ.. ಸ್ಕೋರು ಬೋರ್ಡ್ ನೋಡು.. ಬಾಲ್ಗೆ ತಕ್ಕಂತೆ ರನ್ ಬೇಕು ಅಷ್ಟೇ.,. ಆಗ ಭಜ್ಜಿ ಹೇಳಿದ್ದು ಸರಿ ಅಂತ ನನಗೆ ಅನ್ನಿಸಿತ್ತು ಎಂದರು ಕೈಫ್.
ಇನ್ನು ಕೊನೆಯ 4 ಓವರ್ಗಳಲ್ಲಿ ಗೆಲ್ಲಲು ಬೇಕಾಗಿದ್ದು 25 ರನ್. ಡರೇನ್ ಗಫ್ ಅವರನ್ನು ನಾಸೀರ್ ಹುಸೇನ್ ಹೆಚ್ಚು ನಂಬುತ್ತಿದ್ದರು. ಆದ್ರೆ ಅವರ ಓವರ್ನಲ್ಲಿ ನಾನು ಬೌಂಡರಿ ಬಾರಿಸಿದ್ದೆ. ಬಳಿಕ ಹರ್ಭಜನ್ ಸಿಂಗ್ ಫ್ಲಿಂಟಾಫ್ಗೆ ವಿಕೆಟ್ ಒಪ್ಪಿಸಿದ್ರು. ಅನಿಲ್ ಕುಂಬ್ಳೆ ಸ್ಟೀವ್ ಬಕ್ನರ್ ಅವರ ಕೆಟ್ಟ ತೀರ್ಪಿಗೆ ಬಲಿಯಾದ್ರು. ಅದು 48ನೇ ಓವರ್ನ ಕೊನೆಯ ಎಸೆತ. ಆಗ ನಮಗೆ ಬೇಕಾಗಿದ್ದು ಬರೀ ಆರು. ಡರೇನ್ ಗಫ್ ಅವರ ಎಸೆತವನ್ನು ಬೌಂಡರಿ ಬಾರಿಸಿದ್ದೆ. ಆಗಲೂ ನಾವು ಗೆಲ್ಲುತ್ತೇವೆ ಅಂತ ನಂಬಿಕೆ ಇರಲಿಲ್ಲ. ಯಾಕಂದ್ರೆ ಜಹೀರ್ ಖಾನ್ ಔಟಾದ್ರೆ, ಮತ್ತೆ ಬ್ಯಾಟಿಂಗ್ಗೆ ಬರೋದು ನೇಹ್ರಾಜಿ. ನೇಹ್ರಾ ಅವರು ಏನು ಎಂಬುದು ಗೊತ್ತು.. ಜಹೀರ್ ಎರಡು ಡಾಟ್ ಬಾಲ್ ಎಸೆತಗಳನ್ನು ಎದುರಿಸಿದ್ದರು. ಮೂರನೇ ಎಸೆತದಲ್ಲಿ ಒಂಟಿ ರನ್ ಗಳಿಸಿದ್ರು. ಓವರ್ ಥ್ರೋ ಆದ ಕಾರಣ ಇನ್ನೊಂದು ರನ್ ಬಂತು. ಇಷ್ಟೇ ನ್ಯಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ಆಗಿದ್ದು ಅಂತ ಖುಷಿಯಿಂದಲೇ ಹೇಳಿಕೊಂಡಿದ್ದಾರೆ ಮಹಮ್ಮದ್ ಕೈಫ್.
ನನಗೆ ಇನ್ನೂ ನೆನಪಿದೆ. ಗೆಲುವಿನ ರನ್ ದಾಖಲಿಸಿದ್ದ ನಂತರ ಏನಾಯ್ತು ಎಂಬುದು. ಯುವರಾಜ್ ಸಿಂಗ್ ಓಡೋಡಿ ಬಂತು ತಬ್ಬಿಕೊಂಡ್ರು. ಬಳಿಕ ಗಂಗೂಲಿ.. ಗಂಗೂಲಿ ಲಾಡ್ರ್ಸ್ ಬಾಲ್ಕನಿಯಲ್ಲಿ ಟೀ ಶರ್ಟ್ ಬಿಚ್ಚಿ ಕುಣಿದಾಡಿದ್ರು. ಅವರ ಸಂಭ್ರಮದಲ್ಲಿ ನಾವಿಬ್ಬರು ಕೆಳಗೆ ಬಿದ್ದಿದ್ದೇವು. ರಾಹುಲ್ ದ್ರಾವಿಡ್ ಕೂಡ ಸಂಭ್ರಮದಲ್ಲಿ ತೇಲಾಡಿದ್ರು. ಸಾಮಾನ್ಯವಾಗಿ ದ್ರಾವಿಡ್ ಆ ರೀತಿ ವರ್ತಿಸುವುದಿಲ್ಲ. ಹಾಗೇ ಸಚಿನ್ ತೆಂಡುಲ್ಕರ್ ಕೂಡ. ಪಂದ್ಯದ ನಂತರ ಸಚಿನ್ ಆ ದಿನಗಳಲ್ಲಿ ಮೈದಾನಕ್ಕೆ ಬರುತ್ತಿರಲಿಲ್ಲ. ಆದ್ರೆ ಅವತ್ತೂ ಸಚಿನ್ ಕೂಡ ಓಡೋಡಿ ಮೈದಾನಕ್ಕೆ ಬಂದಿದ್ದರು. ಇದೊಂದು ಅವಿಸ್ಮರಣೀಯ ದಿನವಾಗಿತ್ತು. ಕ್ರಿಕೆಟ್ ದಂತಕಥೆಗಳ ಎದುರು ನಾವು ಗೆಲುವಿನ ಸಂಭ್ರಮವನ್ನು ಆಚರಿಸಿಕೊಂಡಿದ್ದೇವು ಎಂಬುದನ್ನು ಮಹಮ್ಮದ್ ಕೈಫ್ ತನ್ನ ಅಂಕಣದಲ್ಲಿ ಬರೆದುಕೊಂಡಿದ್ದಾರೆ.
ಗೆಲುವಿನ ನಂತರ ನಾನು ಅಲಹಾಬಾದ್ಗೆ ಬಂದೆ. ನಾನು ತವರಿಗೆ ಆಗಮಿಸುವಾಗ ಆ ಸಂತಸಕ್ಕೆ ಪಾರವೇ ಇರಲಿಲ್ಲ. ನಾನು ತುಂಬಾನೇ ನಾಚಿಕೆ ಸ್ವಭಾವದವ. ನನ್ನ ಮನೆಯಲ್ಲಿ ತುಂಬಾ ಜನ ಸೇರಿದ್ದರು. ನನ್ನ ಅಮ್ಮ ಎಲ್ಲರಿಗೂ ಟೀ ಕೊಡುತ್ತಿದ್ದರು. ಇನ್ನು ಮಾಧ್ಯಮಗಳ ಆಕರ್ಷಣೆ ಬೇರೆ. ನಾನು ಎಲ್ಲಿ ಹೋಗುತ್ತೇನೋ ಅಲ್ಲಿಗೆ ಬರುತ್ತಿದ್ದರು. ನಾನು ಗಾಳಿಪಟ ಹಾರಿಸುವುದನ್ನು ತುಂಬಾ ಇಷ್ಟಪಡುತ್ತಿದೆ. ಯಮುನಾ ನದಿ ತೀರದಲ್ಲಿ ಗಾಳಿ ಪಟ ಹಾರಿಸುತ್ತಿರುವಾಗ ಅವರೆಲ್ಲಾ ಹೇಳುತ್ತಿದ್ದರು. ಕೈಫ್ ಗಾಳಿಪಟ ಹಾರಿಸುತ್ತಿದ್ದಾರೆ ಅಂತ. ಅರೇ ನಾನು ಬಾಲ್ಯದಲ್ಲೇ ಗಾಳಿಪಟ ಹಾರಿಸಿಕೊಂಡು ಬೆಳೆದವನು ಅಂತ ನಾನು ಅವರಿಗೆ ಹೇಳಬೇಕಾಗಿತ್ತು ಅಂತಾರೆ ಕೈಫ್.
ಈ ಗೆಲುವು ಭಾರತದ ಕ್ರಿಕೆಟ್ ತಂಡಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿತ್ತು. ಬೃಹತ್ ಸವಾಲನ್ನು ಬೆನ್ನಟ್ಟಬಲ್ಲೇವು ಎಂಬುದನ್ನು ವಿಶ್ವ ಕ್ರಿಕೆಟ್ಗೆ ತೋರಿಸಿಕೊಟ್ಟಂತಾಗಿತ್ತು. ಈ ಕಾರಣದಿಂದಲೇ ಈ ಪಂದ್ಯವನ್ನು ಇವತ್ತಿಗೂ ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. 1983ರ ನಂತರ ಲಾಡ್ರ್ಸ್ ಮೈದಾನದಲ್ಲಿ ಭಾರತ ಗೆದ್ದ ಐತಿಹಾಸಿಕ ಪಂದ್ಯವಾಗಿದೆ.
ಇನ್ನೊಂದು ವಿಚಾರವನ್ನು ಮಹಮ್ಮದ್ ಕೈಫ್ ಇಲ್ಲಿ ನೆನಪು ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ನಿಂದ ತವರಿಗೆ ಬಂದಾಗ ಕ್ರಿಕೆಟ್ ಅಭಿಮಾನಿಗಳು ವಿಜಯೋತ್ಸವನ್ನು ಏರ್ಪಡಿಸಿದ್ರು. ನನ್ನನ್ನು ಓಪನ್ ಜೀಪ್ನಲ್ಲಿ ಮೆರವಣಿಗೆ ಮಾಡಿದ್ದರು. ಐದಾರು ಕಿಲೋ ಮೀಟರ್ ದೂರವನ್ನು ಕ್ರಮಿಸಲು ನಾಲ್ಕು ಗಂಟೆಗಳು ಬೇಕಾಗಿದ್ದವು. ಆಗ ನನಗೆ ಆಮಿತಾಬ್ ಬಚ್ಚನ್ ನೆನಪಾದ್ರು. ಯಾಕಂದ್ರೆ ನಾನು ಚಿಕ್ಕವನ್ನಿದ್ದಾಗ ಅಮಿತಾಬ್ ಬಚ್ಚನ್ ಅವರನ್ನು ಇದೇ ಓಪನ್ ಜೀಪ್ನಲ್ಲಿ ಮೆರವಣಿಗೆ ಮಾಡಿದ್ದರು. ಅವರು ಅಲಹಾಬಾದ್ ಚುನಾವಣೆಯಲ್ಲಿ ಗೆದ್ದಿದ್ದರು. ಹಾಗೇ ನಾನು ಅಮಿತಾಬ್ ಬಚ್ಚನ್ ಅಂತ ಭಾಸವಾಗಿತ್ತು ಅಂತ ಮಹಮ್ಮದ್ ಕೈಪ್ ತನ್ನ ಅಂಕಣದಲ್ಲಿ ಬರೆದಿದ್ದಾರೆ.