ಹಿಂದೂ ಸಂಘಟನೆಗಳ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಕುರಿತಂತೆ ಬಿಜೆಪಿ ಹಿರಿಯ ಮುಖಂಡ ಹಾಗೂ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆಯ ನಂತರವೂ ಕಾಂಗ್ರೆಸ್ ನಾಯಕರು ಒಬ್ಬರೂ ಅವರ ಮನೆಗೆ ಭೇಟಿ ನೀಡದಿರುವುದನ್ನು ತೀವ್ರವಾಗಿ ಟೀಕಿಸಿದರು.
ದನ ಕಳ್ಳರಾಗಿದ್ದ ಇದ್ರಿಸ್ ಪಾಷ ಮತ್ತು ಕಬೀರ್ ಮೃತರಾದಾಗ, ಕಾಂಗ್ರೆಸ್ನ ಪ್ರಮುಖ ನಾಯಕರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು, ಪರಿಹಾರ ಘೋಷಿಸಿದರು. ಆದರೆ ಸುಹಾಸ್ ಶೆಟ್ಟಿ ಹತ್ಯೆಯಾದರೂ ಕೂಡ, ಅವರ ಕುಟುಂಬವನ್ನು ನೋಡುವ ನೈತಿಕ ಹೊಣೆಕೆಯನ್ನೂ ಈ ಸರ್ಕಾರ ತೋರಿಸಿಲ್ಲ. ಇದು ಸ್ಪಷ್ಟವಾಗಿಯೇ ಓಲೈಕೆ ರಾಜಕೀಯ ಎಂದು ಸಿ.ಟಿ. ರವಿ ಆರೋಪಿಸಿದರು.
ಅವರು ತಮ್ಮ ಟೀಕೆಯನ್ನು ಮುಂದುವರೆಸಿ, ಈ ಸರ್ಕಾರ ಕ್ರಿಮಿನಲ್ಗಳಿಗೆ ಬೆಂಬಲ ನೀಡುತ್ತಿರುವ, ಸಮುದಾಯ ಆಧಾರಿತ ಪಕ್ಷಪಾತಿ ಸರ್ಕಾರವಾಗಿದೆ. ಇದು ಕಮ್ಯುನಲ್ ಸರ್ಕಾರ. ಇಂತಹ ನಿರ್ಲಕ್ಷ್ಯ ನಡವಳಿಕೆಯಿಂದ ಸಮಾಜದಲ್ಲಿ ಅನಿಷ್ಠ ಶಕ್ತಿ ಗಳಿಗೆ ಧೈರ್ಯ ಬರುತ್ತಿದೆ, ಎಂದು ಹೇಳಿದರು.
ಬಿಜೆಪಿ ನಾಯಕರು ಈ ಪ್ರಕರಣವನ್ನು ಕೇವಲ ಕ್ರೈಂ ಇವೆಂಟಾಗಿ ನೋಡದೇ, ಸರ್ಕಾರದ ಮೌನ ಹಾಗೂ ಪಕ್ಷಪಾತದ ರಾಜಕೀಯದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ಸುಹಾಸ್ ಶೆಟ್ಟಿಯ ಹತ್ಯೆ ಪ್ರಕರಣದ ತನಿಖೆಗೆ ಗಂಭೀರತೆ ನೀಡಬೇಕು, ಆರೋಪಿಗಳನ್ನು ಕಟ್ಟುನಿಟ್ಟಾಗಿ ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.