ಪ್ರಧಾನಿ ನರೇಂದ್ರ ಮೋದಿ ದೇಶದ ಬೆಲೆ ಏರಿಕೆಯ ಸರದಾರರಷ್ಟೇ ಅಲ್ಲ, ಸುಳ್ಳಿನ ಸರದಾರರೂ ಹೌದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾವೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ತಮ್ಮ ಭಾಷಣಗಳಲ್ಲಿ ಕೊಟ್ಟ ಭರವಸೆಗಳ ಪೈಕಿ ಒಂದಾದರೂ ಜಾರಿಯಾದ ಉದಾಹರಣೆ ಇದೆಯಾ?”ಎಂದು ಕೇಳಿ, ಪ್ರಧಾನಿಗೆ ನೇರ ಸವಾಲು ಹಾಕಿದರು.
ನೋಟ್ ಬ್ಯಾನ್, ಜಿಎಸ್ಟಿ, 2 ಕೋಟಿ ಉದ್ಯೋಗ, ಕಪ್ಪು ಹಣ ಮರಳಿ ತರುತ್ತೇವೆ… ಎಲ್ಲವೂ ಜನರ ಭರವಸೆ ಗೆಲ್ಲಲು ಮಾತ್ರ. ಆದರೆ ಕಾರ್ಯರೂಪಕ್ಕೆ ತಂದು ಜನರ ಜೀವನದ ಮೇಲೆ ಪರಿಣಾಮ ಬೀರುವಂತಹ ಯಾವ ಭರವಸೆಯನ್ನೂ ಪ್ರಧಾನಿ ಈಡೇರಿಸಿಲ್ಲ, ಎಂದು ಸಿಎಂ ಹೇಳಿದರು.
ಅವರು ಮುಂದುವರೆದು, ಹಾವೇರಿ ಜಿಲ್ಲೆ ಸಾಹಿತ್ಯ, ಸಂಸ್ಕೃತಿ ಮತ್ತು ಅಧ್ಯಾತ್ಮದಲ್ಲಿ ಶ್ರೀಮಂತವಾಗಿದೆ. ಇಂತಹ ಪ್ರದೇಶದಲ್ಲಿ ಜನರು ಬುದ್ಧಿವಂತಿಕೆಯಿಂದ ಮತಹಾಕುತ್ತಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ, ಎಂದು ವಿಶ್ವಾಸ ವ್ಯಕ್ತಪಡಿಸಿದರು.