ಬೆಂಗಳೂರು: ಪುಡಾರಿಗಳು ಕುಡಿದ ಮತ್ತಿನಲ್ಲಿ ಲಾಂಗ್, ಮಚ್ಚಿನಿಂದ ವಾಹನಗಳನ್ನು ಜಖಂ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಲಗ್ಗೆರೆಯ ರಾಜೀವ್ ಗಾಂಧಿ ನಗರದಲ್ಲಿ (Laggere, Rajiv Gandhi Nagar) ನಡೆದಿದ್ದು, ಸುಮಾರು 30ಕ್ಕೂ ಅಧಿಕ ವಾಹನಗಳ (Vehicles) ಮೇಲೆ ಪುಂಡರು ಲಾಂಗ್ ಬೀಸಿ ಹಾನಿ ಮಾಡಿದ್ದಾರೆ. ಶುಕ್ರವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಧರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಪುಂಡರ ಕಿತಾಪತಿಗೆ 12 ಕಾರು, 1 ಆಟೋ, 4 ಟೆಂಪೋಗಳ ಗ್ಲಾಸ್ ಪುಡಿ ಪುಡಿಯಾಗಿವೆ. ಮೂವರು ಕಿಡಿಗೇಡಿಗಳು ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂ ಮಾಡಿದ್ದರೆ. ಈ ಪುಡಾರಿಗಳು ಕೇವಲ 5 ನಿಮಿಷದಲ್ಲಿಯೇ 30ಕ್ಕೂ ಅಧಿಕ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳೀಯ ಪುಡಾರಿಗಳಿಂದ ಈ ಕೃತ್ಯ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಸಕ ಮುನಿರತ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪುಂಡರ ಹೆಡೆಮೂರಿ ಕಟ್ಟಬೇಕೆಂದು ಪೊಲೀಸರಿಗೆ ಸೂಚಿಸಿದ್ದಾರೆ.