ನವದೆಹಲಿ : ಪುಲಿಟ್ಜರ್ ಪ್ರಶಸ್ತಿ ಪಡೆದ ಭಾರತೀಯ ಪತ್ರಕರ್ತರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದು, ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕಾಶ್ಮೀರದ ಪತ್ರಕರ್ತರಾದ ಚನ್ನಿ ಆನಂದ್, ಮುಖ್ತಾರ್ ಖಾನ್ ಹಾಗೂ ದರ್ ಯಾಸಿನ್ ಅವರಿಗೆ ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿ ಸಿಕ್ಕಿದೆ. ಈ ಪತ್ರಕರ್ತರನ್ನು ಪ್ರಶಂಸಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಮ್ಮು-ಕಾಶ್ಮೀರದ ಶಕ್ತಿಶಾಲಿ ಚಿತ್ರಣವನ್ನು ಬಿಚ್ಚಿಟ್ಟಿದ್ದೀರಿ ಎಂದು ಹೊಗಳಿದ್ದರು. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ರಾಷ್ಟ್ರವಿರೋಧಿ ಅಡಿ ಬರಹದ ಜೊತೆಗೆ ಪ್ರಕಟಗೊಂಡ ಫೋಟೋಗಳನ್ನೇ ಮುಂದಿಟ್ಟುಕೊಂಡು ಪುಲಿಟ್ಜರ್ ಪ್ರಶಸ್ತಿ ನೀಡಲು ಬಂದಾಗ ಸ್ವೀಕರಿಸಿದ್ದೇಕೆ ಎಂದು ಪತ್ರಕರ್ತರನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ. ಭಾರತೀಯರೆಂದು ಹೇಳಿಕೊಳ್ಳುವ ಈ ಪತ್ರಕರ್ತರಿಗೆ ದೇಶದ ಸಾರ್ವಭೌಮತೆ ಮುಖ್ಯವೋ, ಪ್ರಶಸ್ತಿ ಮುಖ್ಯವೋ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಪ್ರಶಸ್ತಿ ಪುರಸ್ಕೃತರನ್ನು ಹೊಗಳಿದ ರಾಹುಲ್ ಗಾಂಧಿ ನಡೆಯನ್ನೂ ಸಂಬಿತ್ ಪಾತ್ರ ಖಂಡಿಸಿದ್ದಾರೆ.
.
ಜಮ್ಮು ಕಾಶ್ಮೀರದ ಸ್ವಾತಂತ್ರ್ಯವನ್ನು ಭಾರತ ಕಿತ್ತುಕೊಂಡಿದೆ ಎಂದು ಉಲ್ಲೇಖಿಸಿದ್ದರೂ ಕೂಡಾ ರಾಹುಲ್ ಗಾಂಧಿ ಪ್ರಶಸ್ತಿ ಪುರಸ್ಕೃತರನ್ನು ಹೊಗಳುತ್ತಿರೋದೇಕೆ ಎಂದು ಪ್ರಶ್ನಿಸಿರುವ ಬಿಜೆಪಿ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೋ ಅಲ್ಲವೋ ಎಂಬ ಬಗ್ಗೆ ವಿರೋಧ ಪಕ್ಷದ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದೆ
ಅಲ್ಲದೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಕಾಶ್ಮೀರ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಬಿಜೆಪಿ ಒತ್ತಾಯಿಸಿದೆ.