ಬೀದರ್: ಸತತ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿದ ಗಡಿ ಜಿಲ್ಲೆ ಬೀದರ್ ನಲ್ಲಿ ಅವಾಂತರ ಸೃಷ್ಟಿಯಾಗಿದೆ. ವರುಣನ ಆರ್ಭಟಕ್ಕೆ ರೈತರು ನಲುಗಿ ಹೋಗಿದ್ದರೆ, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಮಾಂಜ್ರಾ, ಕಾರಂಜಾ ನದಿಗಳು ಉಕ್ಕಿ ಹರಿಯುತ್ತಿವೆ. ಮಾಂಜ್ರಾ, ಕಾರಂಜಾ, ದೇವಣಿ ನದಿಗಳು ಉಕ್ಕಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು. ನದಿ ದಡದಲ್ಲಿರುವ ಗ್ರಾಮಗಳಲ್ಲಿ ಈಗ ಪ್ರವಾಹ ಭೀತಿ ಕಾಡುತ್ತಿದೆ.
ಮೊತ್ತೊಂದು ನೀರಿನ ರಭಸಕ್ಕೆ ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಸಂಗಮ-ಖೇಡಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ತಡೆಗೋಡೆ ಕುಸಿದು ಬಿದ್ದಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಸೇತುವೆ ಮೇಲಿಂದ ನೀರು ಹರಿಯುತ್ತಿರುವ ಕಾರಣ ನೀರಿನ ರಭಸಕ್ಕೆ ಸೇತುವೆಯ ತಡೆಗೋಡೆ ಕುಸಿದು ಬಿದ್ದಿದೆ. ಸಂಗಮದಿಂದ ಖೇಡಾ, ಸೋನಾಳ-ಲಖನಗಾಂವ್, ಕಮಲನಗರ- ಔರಾದ್ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಮಾಂಜ್ರಾ, ಕಾರಂಜಾ ಮತ್ತು ದೇವಣಿ ನದಿಗಳ ಪಕ್ಕದಲ್ಲಿರುವ ಹೊಲಗಳು ಸಂಪೂರ್ಣ ಜಲಾವೃತಗೊಂಡು 28000 ಹೆಕ್ಟರ್ ಕಬ್ಬು, 45000 ಹೆಕ್ಟರ್ ಪ್ರದೇಶದ ಸೋಯಾ, ತೋಗರಿ, ಉದ್ದು ಹೀಗೆ ಮುಂಗಾರು ಹಂಗಾಮಿನ ಬೆಳೆ ಸರ್ವನಾಶವಾಗಿರುವ ಪ್ರಾಥಮಿಕ ವರದಿ ಬಂದಿದ್ದು ರೈತರು ಕಣ್ಣೀರು ಹಾಕುವಂತಾಗಿದೆ.
ಅಲ್ಲದೆ 266 ಮನೆಗಳ ಗೋಡೆಗಳು ಕುಸಿದಿದ್ದು ಜಿಲ್ಲೆಯ ಜನವಾಡ, ಸಾಯಗಾಂವ್ ಹಾಗೂ ಬ್ಯಾಲಹಳ್ಳಿಯಲ್ಲಿ ಸಾವು ಸಂಭವಿಸಿದೆ. ಒಟ್ಟು ಮೂವರನ್ನು ಬಲಿ ತೆಗೆದುಕೊಂಡ ಮಳೆ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ವಾಡಿಕೆಗಿಂತ ಎರಡು ಪಟ್ಟು ಅಧಿಕ ಮಳೆಯಾಗಿದ್ದು ಮಾಂಜ್ರಾ, ಕಾರಂಜಾ, ದೇವಣಿ ನದಿಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ನದಿ ದಡದಲ್ಲಿ ಬರುವ ಗ್ರಾಮಗಳಿಗೆ ಮುನ್ನೇಚ್ಚರಿಕೆ ಕ್ರಮವಾಗಿ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸಂದೇಶ ರವಾನಿಸಿದೆ.
ಕಳೆದ ಮೂರು ವರ್ಷದಿಂದ ರೈತ ಸಮುದಾಯ ಭೀಕರ ಬರಗಾಲದಿಂದ ಬೆಂದು ಹೊಗಿದ್ದರು. ಈ ಬಾರಿ ಸರಿಯಾಗಿ ಮಳೆ, ಬೆಳೆಯಾಗಿದೆ ಎಂದು ರೈತರು ಖುಷಿಯಲ್ಲಿದ್ದರು,. ಆದರೆ ರೈತರ ಈ ಖುಷಿ ಬಹಳಷ್ಟು ದಿನ ಇರಲು ವರುಣ ಬಿಡದೇ ಭಯಂಕರ ಮಳೆಯ ರೌದ್ರಾವತಾರದಿಂದ ರೈತರಿಗೆ ಕಂಗಾಲಾಗುವಂತೆ ಮಾಡಿದ್ದಾನೆ.