ಬೆಂಗಳೂರು: ರಾಜ್ಯಸಭಾ ಚುನಾವಣೆ ಹಾಗೂ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ಫೆ. 26ರಿಂದ 28ರ ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗದೆ. ರಾಜಕೀಯ ಪಕ್ಷಗಳು, ಹಲವು ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ 144ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ರಿಂದ ಆದೇಶ ನೀಡಲಾಗಿದೆ. ರಾಜ್ಯದ ನಾಲ್ಕು ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಲಿದೆ. ಹೀಗಾಗಿ ಅಂದು ಬೆಳಿಗ್ಗೆ 10ರಿಂದ ವಿಧಾನಸೌಧದಲ್ಲಿ ಮತದಾನ ಆರಂಭವಾಗಲಿದ್ದು, ಸಂಜೆ 4 ಗಂಟೆಯವರೆಗೂ ನಡೆಯಲಿದೆ. ನಂತರ 5 ಗಂಟೆಯವರೆಗೆ ಮತಗಳ ಎಣಿಕೆ ನಡೆಯಲಿದೆ.
ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಗೆ ಶಾಕ್ ನೀಡಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ತಂತ್ರ ಹೂಡಿವೆ. ಎರಡನೇ ಅಭ್ಯರ್ಥಿ ಮೂಲಕ ಕಾಂಗ್ರೆಸ್ಗೆ ಚೆಕ್ಮೆಟ್ ಕೊಡುವುದಕ್ಕೆ ಸನ್ನದ್ಧವಾಗಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಅಖಾಡಕ್ಕೆ ಇಳಿಸಲಾಗಿದೆ.
ವಿಧಾನಸಭೆ ಬಲಾಬಲದ ಪ್ರಕಾರ ಕಾಂಗ್ರೆಸ್ ಮೂರು ಸ್ಥಾನ, ಬಿಜೆಪಿ ಒಂದು ಸ್ಥಾನ ಗೆಲ್ಲುವುದಕ್ಕೆ ಅವಕಾಶವಿದೆ. ಆದರೆ, ಸದ್ಯ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ 2ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಹೀಗಾಗಿ ಕಾಂಗ್ರೆಸ್ ಗೆ ಅಡ್ಡಮತದಾನದ ಭೀತಿ ಆರಂಭವಾಗಿದೆ. ಓರ್ವ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತದೆ. ಕಾಂಗ್ರೆಸ್ ನ ಸಂಖ್ಯಾಬಲ 135 ಇರುವುದರಿಂದ ಮೂರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಬಹುದು. ಬಿಜೆಪಿ ಸಂಖ್ಯಾಬಲ 66 ಆಗಿದ್ದು, ಕೇವಲ ಒಬ್ಬ ಅಭ್ಯರ್ಥಿಯನ್ನ ಮಾತ್ರ ಗೆಲ್ಲಿಸಬಹುದಾಗಿದೆ.
ಬಿಜೆಪಿ ಹತ್ತಿರ ಇರುವ 66 ಮತಗಳಲ್ಲಿ 45 ಮತಗಳು ಓರ್ವ ಅಭ್ಯರ್ಥಿಗೆ ಹಾಕಿದರೆ 21 ಹೆಚ್ಚುವರಿ ಮತ ಉಳಿಯಲಿವೆ. ಬಿಜೆಪಿ 21 ಮತ, ಜೆಡಿಎಸ್ ಬಳಿ ಇರುವ 19, ಪಕ್ಷೇತರ 2, ಕೆಆರ್ಪಿಪಿ, ಸರ್ವೋದಯ ಕರ್ನಾಟಕದ ತಲಾ 1 ಮತಗಳನ್ನ ಪಡೆಯಲು ಸಾಧ್ಯವಾದರೆ 44 ಮತ ಕುಪೇಂದ್ರ ರೆಡ್ಡಿ ಪಾಲಾಗಲಿದೆ. ಕಾಂಗ್ರೆಸ್ ನಲ್ಲಿನ ಅಸಮಾಧಾನಿತರಿಗೆ ಗಾಳ ಹಾಕಿ ಎರಡು ಅಥವಾ ಮೂರು ಅಡ್ಡ ಮತ ಹಾಕಿಸಿದರೆ, ಕಾಂಗ್ರೆಸ್ ಗೆ ಪೆಟ್ಟು ನೀಡಬಹುದು ಎಂಬುವುದು ಲೆಕ್ಕಾಚಾರವಾಗಿದೆ.