ರಾಜ್ಯಸಭಾ ಸದಸ್ಯರಿಗೆ ನೀತಿ ಸಂಹಿತೆ ಹೊರಡಿಸಿದ ರಾಜ್ಯಸಭೆ Saaksha Tv
ನವದೆಹಲಿ: ರಾಜ್ಯಸಭೆಯಲ್ಲಿ ಸಂಸದರ ಕಾರ್ಯವೈಖರಿ ಕುರಿತು ರಾಜ್ಯಸಭಾ ಕಾರ್ಯಾಲಯ ತನ್ನ ಸಂಸದರಿಗೆ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಿದೆ.
ಮುಂದಿನ ತಿಂಗಳಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಈ ಅಧಿವೇಶನದಲ್ಲಿ ಸಂಸದರು ಕಾರ್ಯವೈಕರಿ ಕುರಿತು ನೀತಿ ಸಂಹಿತೆಯನ್ನು ಹೊರಡಿಸಿದೆ. ಈ ನೀತಿ ಸಂಹಿತೆಯಲ್ಲಿ ರಾಜ್ಯಸಭೆಯ ಸದಸ್ಯರು ತಮ್ಮಲ್ಲಿರುವ ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು ಮತ್ತು ಜನರ ಒಳಿತಿಗಾಗಿ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.
ಅಲ್ಲದೇ ಸಂಸದರು ಸಂವಿಧಾನ, ಕಾನೂನು, ಸಂಸದೀಯ ಸಂಸ್ಥೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರನ್ನು ಗೌರವಿಸಬೇಕು. ಅವರು ಸಂವಿಧಾನದ ಪೀಠಿಕೆಯಲ್ಲಿ ತಿಳಿಸಲಾದ ಆದರ್ಶಗಳನ್ನು ವಾಸ್ತವಕ್ಕೆ ತರಲು ನಿರಂತರವಾಗಿ ಶ್ರಮಿಸಬೇಕು ಎಂದು ಹೇಳಲಾಗಿದೆ.
ಇನ್ನೂ ಸದನದಲ್ಲಿ ಯಾವುದೇ ನಿರ್ಣಯ ಮಂಡಿಸಲು-ಮಂಡಿಸದಿರಲು, ಮಸೂದೆಯನ್ನು ಮಂಡಿಸಲು-ಮಂಡಿಸದಿರಲು, ಮತ ಹಾಕಲು-ಮತ ಹಾಕದಿರಲು ಯಾವುದೇ ಶುಲ್ಕ, ಸಂಭಾವನೆ ಅಥವಾ ಪ್ರಯೋಜನವನ್ನು ಯಾರಿಂದಲೂ ನಿರೀಕ್ಷೆ ಮಾಡಬಾರದು, ಸ್ವೀಕರಿಸಬಾರದು ಎಂದು ಹೇಳಿದೆ.
ಹಾಗೇ ಪ್ರಶ್ನಿಸುವುದು ಅಥವಾ ಪ್ರಶ್ನೆ ಕೇಳುವುದರಿಂದ ದೂರವಿರುವುದು ಅಥವಾ ಸದನ ಅಥವಾ ಸಂಸದೀಯ ಸಮಿತಿಯ ಚರ್ಚೆಗಳಲ್ಲಿ ಭಾಗವಹಿಸುವುದು ಮುಂತಾದ ಕರ್ತವ್ಯಗಳ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಯಾವುದೇ ಪ್ರಕ್ರಿಯೆಗೆ ಒಳಪಡಬಾರದೆಂದು ನೀತಿ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.