ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ.
ಸ್ಥಳಕ್ಕೆ ಎನ್ ಎಸ್ ಜಿ ಕಮಾಂಡೋಸ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರತು ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 471 (ಸುಳ್ಳು ಸ್ಪಷ್ಟನೆಯ ದಸ್ತಾವೇಜನ್ನು ನೈಜವಾದುದೆಂದು ಬಳಸುವುದು), ಯುಎಪಿಯ 16 (ಭಯೋತ್ಪಾದಕ ಕೃತ್ಯ), 18 (ಪಿತೂರಿ) ಹಾಗೂ 38 (ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಅಪರಾಧ) ಮತ್ತು ಎಕ್ಸ್ಪ್ಲೋಸಿವ್ ಸಬ್ಸ್ಟೆನ್ಸ್ ಆ್ಯಕ್ಟ್ 3 (ಜೀವಕ್ಕೆ ಅಥವಾ ಆಸ್ತಿಗೆ ಅಪಾಯನ್ನುಂಟುಮಾಡುವ ಸ್ಫೋಟ) ಮತ್ತು 4 (ಜೀವಕ್ಕೆ ಹಾನಿಯುಂಟುಮಾಡುವ ಉದ್ದೇಶದಿಂದ ಸ್ಫೋಟಕ ತಯಾರಿಕೆ) ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಿನ್ನೆ ನಡೆದ ಸ್ಪೋಟದಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಅಲ್ಲದೇ, ಘಟನೆಯಲ್ಲಿ 9 ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಬೈಕ್ನಲ್ಲಿ ತೆರಳಿದ್ದ ಶಂಕಿತನ ಬೈಕ್ ಮಾಹಿತಿಯನ್ನು ಆಧರಿಸಿ ಆತನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬಾಂಬರ್ ರಾಮೇಶ್ವರಂ ಕೆಫೆಯಲ್ಲಿ ತಿಂಡಿ ತಿಂದು ಕೈತೊಳೆದ ನಂತರ ಬ್ಯಾಗ್ ನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾನೆ. ಆಗ ಅದು ಬ್ಲಾಸ್ಟ್ ಆಗಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.