ಗಾಯದ ಸಮಸ್ಯೆ, IPL 2022 ಟೂರ್ನಿಯಿಂದ ರವೀಂದ್ರ ಜಡೇಜಾ ಔಟ್…
ಐಪಿಎಲ್ನಲ್ಲಿ ಪ್ಲೇ ಆಫ್ ರೇಸ್ ನಿಂದ ಹೊರಬೀಳುವ ಹೊಸ್ತಿಲಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಬರಸಿಡಿಲು ಬಡಿದೆ. ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಜಡೇಜಾ RCB ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು.ಇದರಿಂದಾಗಿ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪ್ಲೇಯಿಂಗ್ XI ನಿಂದ ಹೊರಗುಳಿದಿದ್ದರು.
ಚೆನ್ನೈ 8 ಅಂಕಗಳನ್ನು ಹೊಂದಿದ್ದು, 3 ಪಂದ್ಯಗಳು ಬಾಕಿ ಉಳಿದಿವೆ. 14 ಅಂಕ ಗಳಿಸಲು ಉಳಿದ ಎಲ್ಲ ಪಂದ್ಯಗಳನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಜೊತೆಗೆ ಇತರ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಬೇಕಿದೆ. 4 ತಂಡಗಳು 14 ಪಾಯಿಂಟ್ ಹೊಂದಿರುವುದರಿಂದ ರನ್ ರೇಟ್ ಕೂಡ ಮುಖ್ಯವಾಗಲಿದೆ.
ಐಪಿಎಲ್ ಸೀಸನ್ ಆರಂಭಕ್ಕೆ 2 ದಿನ ಮೊದಲು ಸಿಎಸ್ ಕೆ ನಾಯಕತ್ವವನ್ನು ರವೀಂದ್ರ ಜಡೇಜಾ ವಹಿಸಿಕೊಂಡಿದ್ದರು. ಆದರೆ 8 ಪಂದ್ಯಗಳ ನಂತರ ಜಡೇಜಾ ಮತ್ತೆ ಧೋನಿಗೆ ನಾಯಕತ್ವವನ್ನು ಹಸ್ತಾಂತರಿಸಿದರು. ಜಡೇಜಾ ನಾಯಕತ್ವದಲ್ಲಿ ತಂಡ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ.
ಜಡೇಜಾ ಈ ಬಾರಿ ಆಡಿದ ಒಟ್ಟು 10 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 116 ರನ್ಗಳನ್ನು ಮಾತ್ರವೇ ಗಳಿಸಿದ್ದಾರೆ. ಬೌಲಿಂಗ್ನಲ್ಲೂ ಕಳಾಹೀನ ಪ್ರದರ್ಶನ ತೋರಿ ಕೇವಲ 5 ವಿಕೆಟ್ಗಳನ್ನು ಮಾತ್ರವೇ ಪಡೆಯಲು ಶಕ್ತರಾಗಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಎಂಎಸ್ ಧೋನಿ, “ಕ್ಯಾಪ್ಟನ್ಸಿ ಜವಾಬ್ದಾರಿಯಿಂದ ಜಡೇಜಾ ಅವರ ವೈಯಕ್ತಿಕ ಪ್ರದರ್ಶನ ಕ್ಷೀಣಿಸಿದೆ. ನಮ್ಮ ತಂಡಕ್ಕೆ ಜಡೇಜಾ ಅವರ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮುಖ್ಯ ಸಂಗತಿ. ಹೀಗಾಗಿ ಅವರನ್ನು ಕ್ಯಾಪ್ಟನ್ಸಿ ಜವಾಬ್ದಾರಿಯಿಂದ ಮುಕ್ತರನ್ನಾಗಿಸಲಾಗಿದೆ,” ಎಂದು ಹೇಳಿದ್ದರು.