ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ಉತ್ತಮ ಆರಂಭ ಪಡೆಯಿಲು ಮತ್ತೊಮ್ಮೆ ವಿಫಲವಾಯಿತು. ಬೆತ್ ಮೂನಿ ಕೇವಲ 8 ರನ್, ಲಿಚ್ ಫೀಲ್ಡ್ 5 ರನ್, ವೇದಾ ಕೃಷ್ಣ ಮೂರ್ತಿ ಕೇವಲ 9 ರನ್ ಗಳಿಸಿದರು. ಹರ್ಲೀನ್ ಡಿಯೋಲ್ 31 ಎಸೆತ ಎದುರಿಸಿ 22 ರನ್ ಗಳಿಸಿದರು. ಹೇಮಲತಾ 31 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್ ತಂಡವು 107 ರನ್ ಕಲೆಹಾಕಿತು.
ಸುಲಭ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ಸೋಫಿ ಡಿವೈನ್ (6) ಮತ್ತೊಮ್ಮೆ ವಿಫಲರಾದರು. ನಾಯಕಿ ಸ್ಮೃತಿ ಮಂಧಾನ 27 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 43 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಬ್ಬಿನೇನಿ ಮೇಘನಾ ಅಜೇಯ 36 ಹಾಗೂ ಎಲ್ಲಿಸ್ ಪೆರ್ರಿ ಅಜೇಯ 23 ರನ್ ಬಾರಿಸುವ ಮೂಲಕ 12.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಂಡ ಗುರಿ ಮುಟ್ಟಿಸಿದರು. ಈ ಮೂಲಕ ಆರ್ ಸಿಬಿ 8 ವಿಕೆಟ್ ಗಳ ಜಯ ದಾಖಲಿಸಿ, ಪಾಯಿಂಟ್ ಪಟ್ಟಿಯಲ್ಲಿ ಟಾಪ್ ಗೆ ಏರಿತು.