ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಶಾಸಕರು ಕಾಂಗ್ರೆಸ್ ಕಡೆ ನೋಡಬಾರದು ಎಂಬ ಉದ್ದೇಶದಿಂದ ಸಿಎಂ ಬಿ.ಎಸ್ ಯಡಿಯೂರಪ್ಪ ಈ ಸಭೆಯನ್ನು ಕರೆದಿದ್ದಾರೆ. ಈ ನಡುವೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಈ ನಾಯಕರ ಭೇಟಿ ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಹೊನ್ನಾಳಿಯ ಚನ್ನಪ್ಪ ಸ್ವಾಮಿ ಮಠದಲ್ಲಿ ಮಾರ್ಚ್5ರಿಂದ ನಡೆಯಲಿರುವ 3 ದಿನಗಳ ಕೃಷಿ ಮೇಳದಲ್ಲಿ ಭಾಗವಹಿಸುವಂತೆ ಡಿಕೆ.ಶಿವಕುಮಾರ್ ಅವರನ್ನು ಆಹ್ವಾನ ಮಾಡಲು ರೇಣುಕಾಚಾರ್ಯ ಆಗಮಿಸಿದ್ದು, ಭೇಟಿ ವೇಳೆ ರೇಣುಕಾಚಾರ್ಯ ಅವರು ಡಿಕೆಶಿ ಜೊತೆಗೆ 15 ನಿಮಿಷಗಳ ಕಾಲ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಇದು ಚರ್ಚೆಗೆ ಗ್ರಾಸವಾಗಿದ್ದು, ಭೇಟಿ ವೇಳೆ ಕೆಲ ರಾಜಕೀಯ ವಿಚಾರಗಳನ್ನು ಮಾತನಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಿತ್ತಾಟ ಹಾಗೂ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಬಳಿಕ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಇಬ್ಬರು ನಾಯಕರ ಭೇಟಿ ಇದೀಗ ಕುತೂಹಲ ಕೆರಳಿಸಿದೆ.