ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯನ್ನು ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ಅಭಿಮಾನಿಗಳು ಸರಿಯಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಘಟನೆ ನಡೆದಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕೊಲ್ಲಾಪುರದ ಹನ್ಮಂತವಾಡಿಯಲ್ಲಿ ಈ ಘಟನೆ ನಡೆದಿದೆ. ಬಂಡುಪಂತ್ ಬಾಪುಸೊ ತಿಬಿಲೆ ಕೊಲೆಯಾಗಿರುವ ವ್ಯಕ್ತಿ. ಸಾಗರ್ ಜಾಂಜಗೆ, ಬಲವಂತ ಜಾಂಜಗೆ ಹತ್ಯೆ ಮಾಡಿರುವ ಆರೋಪಿಗಳು. ಹೈದರಾಬಾದ್ ನೀಡಿದ್ದ 277 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಅದ್ಭುತ ಆರಂಭ ನೀಡಿದ್ದರು. ಆದರೆ ಕೆಲವೇ ಎಸೆತಗಳ ಅಂತರದಲ್ಲಿ ಇಬ್ಬರ ವಿಕೆಟ್ ಪತನವಾಯಿತು.
ರೋಹಿತ್ ಶರ್ಮಾ ವಿಕೆಟ್ ಪತನವಾಗಿದ್ದು, ಮುಂಬೈ ಇಂಡಿಯನ್ಸ್ ಪಾಳಯಕ್ಕೆ ಆಘಾತ ಉಂಟು ಮಾಡಿತ್ತು. ಈ ವೇಳೆ ಆ ವ್ಯಕ್ತಿ ಸಂಭ್ರಮಿಸಿದ್ದಕ್ಕೆ ಸಾಗರ್ ಜಾಂಜಗೆ ಮತ್ತು ಬಲವಂತ ಜಾಂಜಗೆಗೂ ಆಘಾತವಾಗಿದೆ. ಈ ವೇಳೆ ಸತ್ತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಿಬಿಲೆ ಅವರು ಪತ್ನಿ, ಮೂವರು ಪುತ್ರಿಯರು, ಅಳಿಯ, ಪುತ್ರ, ಮೊಮ್ಮಕ್ಕಳು, ಸಹೋದರ ಸಹೋದರಿಯರನ್ನು ಅಗಲಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.