ರಾಮನಗರ : ದುಷ್ಕರ್ಮಿಗಳು ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ತಾಲೂಕಿನ ಕೆರೆಮೆಗಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ರೌಡಿಶೀಟರ್(Rowdy Sheeter) ಲೋಕೇಶ್(35) ಹತ್ಯೆಯಾದ ರೌಡಿಶೀಟರ್. ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿಕೊಂಡು ಮರಳಿ ರಾತ್ರಿ ವೇಳೆ ಮನೆಗೆ ಬರುತ್ತಿದ್ದ ಲೋಕೇಶ್ ನನ್ನು ಅಡ್ಡಗಟ್ಟಿ ಅಟ್ಟಾಡಿಸಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಮುಖ, ಕುತ್ತಿಗೆ, ತಲೆಗೆ ಮಾರಾಕಾಸ್ತ್ರದಿಂದ ಕೊಚ್ಚಿರುವ ಹಿನ್ನೆಲೆ ರಕ್ತಸ್ರಾವದಿಂದ ಲೋಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಲೊಕೇಶ್ ನ ಮನೆಯ ಹಿಂದೆಯೇ ಕೊಲೆ ನಡೆಯುತ್ತಿದ್ದರೂ ಮಳೆಯಿಂದಾಗಿ ಯಾರೂ ಹೊರಗೆ ಬಂದಿರಲಿಲ್ಲ. ದರೋಡೆ ಹಾಗೂ ಜನರನ್ನು ಹೆದರಿಸುವ ಹಲವು ಪ್ರಕರಣಗಳಲ್ಲಿ ಲೊಕೇಶ್ ಹೆಸರು ತಳಕು ಹಾಕಿಕೊಂಡಿತ್ತಾದರೂ ಆತನ ಸಾವಿಗೆ ಅಕ್ರಮ ಸಂಬಂಧವೇ ಕಾರಣ ಎಂಬ ಸಂಶಯವೇ ವ್ಯಕ್ತವಾಗಿದೆ.
ಸಮೀಪದ ಸಂಬಂಧಿಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.