ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮತ್ತೆ ಮುಂದುವರಿಯುತ್ತಾರಾ ?
ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಮತ್ತೆ ಅಧಿಕಾರ ನಡೆಸುತ್ತಾರಾ ? ಕಾರ್ಯದರ್ಶಿಯಾಗಿ ಜೈ ಶಾ ಅವರು ಮತ್ತೆ ಮುಂದುವರಿಯುತ್ತಾರಾ ? ಈ ಪ್ರಶ್ನೆಗಳಿಗೆ ಇವತ್ತು ಉತ್ತರ ಸಿಗಲಿದೆ. ಇಂದು ಸುಪ್ರೀಂ ಕೋರ್ಟ್ನಲ್ಲಿ ಈ ವಿಷ್ಯದ ಬಗ್ಗೆ ವಿಚಾರಣೆ ನಡೆಯಲಿದೆ.
ಗಂಗೂಲಿಯವರ ಅಧಿಕಾರ ಅವಧಿ ಇದೇ ತಿಂಗಳ 27ರಂದು ಕೊನೆಗೊಳ್ಳಲಿದೆ. ಹಾಗೇ ಕಾರ್ಯದರ್ಶಿ ಜೈ ಶಾ ಅವರ ಅವಧಿಯೂ ಈಗಾಗಲೇ ಅಂತ್ಯಗೊಂಡಿದೆ. ಈ ಬಗ್ಗೆ ಜೈ ಶಾ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
2013ರಲ್ಲಿ ಐಪಿಎಲ್ ಸ್ಟಾಟ್ ಫಿಕ್ಸಿಂಗ್ ಆದ ನಂತರ ಬಿಸಿಸಿಐನಲ್ಲಿ ಮಹತ್ತರವಾದ ಬದಲಾವಣೆಗಳಾಗಿದ್ದವು. ಸುಪ್ರೀಂ ಕೋರ್ಟ್ ನೇಮಿಸಿದ್ದ ಲೋಧಾ ಸಮಿತಿಯು ಕ್ರಿಕೆಟ್ ಆಡಳಿತಾಧಿಕಾರಿ ಎಂಬ ಹುದ್ದೆಯ ಮೂಲಕ ಬಿಸಿಸಿಐ ಅಧಿಕಾರವನ್ನು ನಡೆಸಿದ್ದರು. ಇದೇ ವೇಳೆ ಬಿಸಿಸಿಐ ಅಪೆಕ್ಸ್ ಸಮಿತಿಯೂ ರಚನೆಯಾಯ್ತು. ಈ ವೇಳೆ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಈ ನಿಯಮದ ಪ್ರಕಾರ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳ ಒಟ್ಟು ಅಧಿಕಾರಾವಧಿ ಆರು ವರ್ಷಗಳಿಂದ ಹೆಚ್ಚಿರಬಾರದು. ಹಾಗೇ ಮೂರು ವರ್ಷಗಳ ನಂತರ ಅವರು ಆಯಾ ಸಂಸ್ಥೆಗಳಿಗೆ ಮತ್ತೆ ಪದಾಧಿಕಾರಿಗಳಾಗಬಹುದು ಎಂಬ ನಿಯಮವನ್ನು ರಚಿಸಲಾಗಿತ್ತು.
ಈ ನಿಯಮದ ಪ್ರಕಾರ ಸೌರವ್ ಗಂಗೂಲಿ ಅವರು ಪಶ್ವಿಮ ಬಂಗಾಳದ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ಅಧಿಕಾರ ನಡೆಸಿದ್ದರು. ಹಾಗೇ ಜೈ ಶಾ ಕೂಡ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಹುದ್ದೆಯ ಚುಕ್ಕಾಣಿ ಹಿಡಿದಾಗ ಅವರಿಗೆ ಕೇವಲ 9 ತಿಂಗಳ ಅಧಿಕಾರಾವಧಿ ಇತ್ತು. ಈಗ ಒಂಬತ್ತು ತಿಂಗಳು ಮುಗಿಯುತ್ತಿದೆ. ಇದ್ರಲ್ಲಿ ಕಳೆದ ನಾಲ್ಕು ತಿಂಗಳು ಕೋವಿಡ್-19, ಲಾಕ್ ಡೌನ್ಗೆ ಸೀಮಿತವಾಯ್ತು. ಗಂಗೂಲಿ ಪೂರ್ಣ ಪ್ರಮಾಣದಲ್ಲಿ ಬಿಸಿಸಿಐನ ಅಧಿಕಾರ ನಡೆಸಿದ್ದು ಕೇವಲ ಐದು ತಿಂಗಳು ಮಾತ್ರ. ಸದ್ಯ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಇನ್ನೊಂದು ಅವಧಿಗೆ ಮುಂದುವರಿಯಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಪೂರಕವಾಗಿ 2013ರ ಸ್ಪಾಟ್ ಫಿಕ್ಸಿಂಗ್ ಹಗರಣದ ಪ್ರಮುಖ ಅರ್ಜಿದಾರ ಆದಿತ್ಯ ವರ್ಮಾ ಸೌರವ್ ಗಂಗೂಲಿ ಮತ್ತು ಜೈ ಶಾ ಬೆಂಬಲಕ್ಕೆ ನಿಂತಿದ್ದಾರೆ. ಆದಿತ್ಯ ವರ್ಮಾ ಅವರು ಬಿಹಾರ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಯೂ ಆಗಿದ್ದರು. ವರ್ಮಾ ಅವರು ಬಿಸಿಸಿಐನ ಅಪೆಕ್ಸ್ ಸಮಿತಿ ಮತ್ತು ಲೋಧಾ ಸಮಿತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದೀಗ ಆದಿತ್ಯ ವರ್ಮಾ ಅವರು ಬಿಸಿಸಿಐ ನ ಸ್ಥಿರತೆಗೆ ಸೌರವ್ ಗಂಗೂಲಿ ಮತ್ತು ಜೈ ಶಾ ಅವರ ಅಗತ್ಯ ಇದೆ. ಬಿಸಿಸಿಐ ಮುನ್ನಡೆಸಲು ಸೌರವ್ ಗಂಗೂಲಿಯೇ ಅತ್ಯುತ್ತಮ ವ್ಯಕ್ತಿ. ಹೀಗಾಗಿ ಬಿಸಿಸಿಐ ಆಡಳಿತ ಸುಧಾರಣೆಗೆ ಅವರಿಗೆ ಪೂರ್ಣ ಪ್ರಮಾಣದ ಅಧಿಕಾರವನ್ನು ನೀಡಬೇಕು. ಇದನ್ನು ನಾನು ಯಾವಾಗಲೂ ಸಮರ್ಥಿಸಿಕೊಳ್ಳುತ್ತೇನೆ. ಹೀಗಾಗಿ ನಾನು ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸುವುದಿಲ್ಲ ಎಂದು ಆದಿತ್ಯ ವರ್ಮಾ ಹೇಳಿದ್ದಾರೆ.