ಬೆಂಗಳೂರು: ಮತ್ತೊಮ್ಮೆ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಎರಡು ವಂದೇ ಭಾರತ್ ರೈಲುಗಳ ಮೇಲೆಯೇ ದುಷ್ಕರ್ಮಿಗಳು ಕಲ್ಲು ನಡೆಸಿದ್ದು, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಗಾಯಗಳು ಸಂಭವಿಸದಿದ್ದರೂ, ನಾಲ್ಕು ಕಿಟಕಿಗಳಿಗೆ ಹಾನಿಯಾಗಿದೆ. ಈ ಒಂದು ಕಿಟಕಿಯನ್ನು ಸರಿಪಡಿಸಲು ಹಾಗೂ ಬದಲಾಯಿಸರು ಬರೋಬ್ಬರಿ 22 ಸಾವಿರ ರೂ. ತಗಲುತ್ತದೆ. ಬೆಂಗಳೂರು-ಧಾರವಾಡ (20661/20662) ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲಿನ ಮೇಲೆ ಎರಡು ಬಾರಿ ಹಾಗೂ ಮೈಸೂರು-ಚೆನ್ನೈ ಸೆಂಟ್ರಲ್ ವಂದೇ ಭಾರತ್ (20608) ರೈಲಿನ ಮೇಲೆ ಕಲ್ಲು ತೂರಲಾಗಿದೆ.
ಭಾನುವಾರ ಬೆಂಗಳೂರಿನಿಂದ ಧಾರವಾಡದ ಕಡೆ ಹೊರಟಿದ್ದ ವಂದೇ ಭಾರತ್ ರೈಲಿನ ಮೇಲೆ ಚಿಕ್ಕಬಾಣಾವರ ರೈಲು ನಿಲ್ದಾಣದ ಹತ್ತಿರ ಕಲ್ಲು ತೂರಲಾಗಿದೆ. ನಂತರ ಇದೇ ರೈಲು ಧಾರವಾಡದಿಂದ ಬೆಂಗಳೂರಿಗೆ ಬರುವ ವೇಳೆ ಹಾವೇರಿ ಮತ್ತು ಹರಿಹರಿ ರೈಲು ನಿಲ್ದಾಣಗಳ ಮಧ್ಯೆ ಕಲ್ಲು ನಡೆಸಿದ್ದಾರೆ. ಮೈಸೂರು-ಚೆನ್ನೈ ಸೆಂಟ್ರಲ್ ವಂದೇ ಭಾರತ್ ರೈಲು ಬೆಂಗಳೂರು ಆಂಧ್ರಪ್ರದೇಶದ ಕುಪ್ಪಂ ರೈಲು ನಿಲ್ದಾಣದ ಬಳಿ ಹೋಗುವಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ರೈಲು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುವುದರಿಂದ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಸ್ವಲ್ಪ ಕಷ್ಟವಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿಯೇ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುತ್ತಿದ್ದಾರೆ. ಸದ್ಯ ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.