ಮಂಡ್ಯ: ಚಾಮರಾಜನಗರದ ಸುಳ್ವಾಡಿ ಕಿಚ್ಗುತ್ತಿ ಮಾರಮ್ಮನ ವಿಷ ಪ್ರಸಾದ ಸೇವನೆ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಅಂತಹದ್ದೇ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಊರಿನ ಮುಖಂಡರೊಬ್ಬರು ಮಗಳ ಮದುವೆ ಪ್ರಯುಕ್ತ ಕಳೆದ ರಾತ್ರಿ ಊರಿನ ಮಾರಮ್ಮನ ದೇವಾಲಯದಲ್ಲಿ ಪೂಜೆ ಮಾಡಿಸಿ ಪ್ರಸಾದದ ರೂಪದಲ್ಲಿ ಪುಳಿಯೋಗರೆ ಮಾಡಿ ವಿತರಿಸಿದ್ದರು.
ಆದರೆ, ಪುಳಿಯೋಗರೆ ಸೇವೆನೆ ಮಾಡಿದ್ದ 100ಕ್ಕೂ ಹೆಚ್ಚು ಮಂದಿಯಲ್ಲಿ ಕೆಲವರಿಗೆ ಕಳೆದ ರಾತ್ರಿ ವಾಂತಿ-ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ಹಲಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಮತ್ತೆ ಬೆಳಿಗ್ಗೆ ಮತ್ತಷ್ಟು ಜನರಿಗೆ ವಾಂತಿ, ಬೇಧಿ ಕಾಣಿಸಿಕೊಂಡ ಪರಿಣಾಮ ಅವರೂ ಹಲಗೂರು ಆಸ್ಪತ್ರೆಗೆ ಬಂದಿದ್ದಾರೆ. ಒಂದೇ ಊರಿನ ನೂರಾರು ಮಂದಿ ಆಸ್ಪತ್ರೆಗೆ ಬಂದಿರುವುದು ವೈದ್ಯರಿಗೆ ಆತಂಕ ಮೂಡಿಸಿದೆ.
ವಿಚಾರಿಸಿದಾಗ ಗ್ರಾಮದ ದೇವರ ಪ್ರಸಾದ ತಿಂದು ಅವಾಂತರ ಆಗಿರುವುದು ತಿಳಿದಿದೆ. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಲಿಂಗಪಟ್ಟಣ ಗ್ರಾಮಕ್ಕೆ ವೈದ್ಯಾಧಿಕಾರಿಗಳ ತಂಡ ಆಗಮಿಸಿದೆ. ಪ್ರಸಾದ ತಿಂದ ಬಹುತೇಕರಿಗೆ ವಾಂತಿ, ಬೇಧಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆ ಬಳಿಕ ಬಹುತೇಕರು ಚೇತರಿಸಿಕೊಂಡಿದ್ದಾರೆ. ಅಸ್ವಸ್ಥಗೊಂಡ ಕೆಲವರನ್ನು ಮಂಡ್ಯ ಹಾಗೂ ಮಳವಳ್ಳಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಫುಡ್ ಪಾಯಿಸನ್ ಕಾರಣ ಘಟನೆ ನಡೆದಿದೆ ಎಂದು ಸ್ಥಳೀಯ ವೈದ್ಯರು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ, ಮಳವಳ್ಳಿ ಡಿವೈಎಸ್ಪಿ ಪೃಥ್ವಿ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ದೇವರ ಪ್ರಸಾದ ತಯಾರು ಮಾಡುವಾಗ ಫುಡ್ ಪಾಯಿಸನ್ ಆಗಿರುವ ಶಂಕೆ ಮೇರೆಗೆ ಪ್ರಸಾದ ಹಾಗೂ ನೀರಿನ ಸ್ಯಾಂಪಲನ್ನು ಪಡೆದು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಗ್ರಾಮದಲ್ಲಿ ಬಹುತೇಕರು ಚೇತರಿಸಿಕೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಆತಂಕಪಡುವ ಅಗತ್ಯ ಇಲ್ಲ ಎಂದು ಡಿಹೆಚ್ಒ ತಿಳಿಸಿದ್ದಾರೆ.
ಸುಳ್ವಾಡಿ ಘಟನೆ ಮಾದರಿಯಲ್ಲೇ ನಡೆದಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯದ ಆತಂಕ ಇಲ್ಲ. ಗ್ರಾಮದಲ್ಲೇ ವೈದ್ಯರ ತಂಡ ಬೀಡುಬಿಟ್ಟಿದ್ದು, ಅಸ್ವಸ್ಥರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ದೇವಾಲಯಗಳಲ್ಲಿ ಪ್ರಸಾದ ವಿತರಣೆಗೆ ಅವಕಾಶ ಇಲ್ಲ. ಆದರೂ, ಪ್ರಸಾದ ವಿತರಣೆ ಮಾಡಿರುವುದು ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೀಗಾಗಿ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಳವಳ್ಳಿ ತಹಶೀಲ್ದಾರ್ ಚಂದ್ರಮೌಳಿ ಮಾಹಿತಿ ನೀಡಿದ್ದಾರೆ.
ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ದುರಂತ
2018ರ ಡಿಸೆಂಬರ್ 14ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ಕಿಚ್ಗುತ್ ಮಾರಮ್ಮನ ದೇವಾಲಯದ ಗೋಪುರ ನಿರ್ಮಾಣಕ್ಕಾಗಿ ಭೂಮಿ ಪೂಜೆ ಮಾಡಲಾಗಿತ್ತು. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆಂದು ಪ್ರಸಾದ ತಯಾರಿಸಿ ವಿತರಣೆ ಮಾಡಲಾಗಿತ್ತು. ಈ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಸಿದ್ದರಿಂದ ವಾಂತಿ ಬೇಧಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದ 17 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ದೇಶಾದ್ಯಂತ ಆತಂಕ ಸೃಷ್ಟಿಯಾಗಿ ದೇವಸ್ಥಾನಗಳಲ್ಲಿ ವಿತರಣೆ ಮಾಡುವ ಪ್ರಸಾದದ ಬಗ್ಗೆಯೇ ಜನರು ಅನುಮಾನ ಮೂಡಿಸುವಂತೆ ಮಾಡಿದೆ.

ಸುಳ್ವಾಡಿಯಲ್ಲಿ ವಿಷಪ್ರಸಾದ ಸೇವಿಸಿ ಬದುಕಿಳಿದ ಹಲವರು ಇಂದಿಗೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಸುಳ್ವಾಡಿ ಘಟನೆ ಕೇವಲ ಭಾರತ ಮಾತ್ರವಲ್ಲದೆ, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಮಳವಳ್ಳಿಯ ಲಿಂಗಪಟ್ಟಣದ ಗ್ರಾಮದ ಪ್ರಸಾದ ಸೇವನೆ ಪ್ರಕರಣ ಜನರ ಆತಂಕಕ್ಕೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








