ಸ್ವಂತ ಹಣದಲ್ಲಿ ಆಕ್ಸಿಜನ್ ಪೂರೈಕೆ ಮಾಡುತ್ತೇನೆ – ಸುಮಲತಾ ಅಂಬರೀಶ್
ಮಂಡ್ಯ : ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ತಮ್ಮ ಸ್ವಕ್ಷೇತ್ರದ ಕಡೆ ಮುಖ ಮಾಡಿ ಬಹುಕಾಲವಾಗಿದೆ.. ಯಾವುದೇ ಅಭಿವೃದ್ಧಿ ಕೆಲಗಳಾಗಿಲ್ಲ ಎಂದು ಪ್ರತಿಪಕ್ಷ ನಾಯಕರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಟೀಕಾ ಪ್ರಹಾರ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ‘ಮಂಡ್ಯ ಸಂಸದೆಯನ್ನು ಹುಡುಕಿಕೊಡಿ’ ಪೋಸ್ಟರ್ಗಳು ಹರಿದಾಡಿದ್ದವು.
ಈ ಟೀಕೆಗಳಿಗೆ ಉತ್ತರಿಸಿರುವ ಸುಮಲತಾ, ತಾವು ಸಕ್ರಿಯವಾಗಿದ್ದು, ಕೊರೊನಾ ಸಂಕಷ್ಟದಲ್ಲಿ ಕ್ಷೇತ್ರದ ಜೊತೆಗೆ ನಿಲ್ಲುವುದಕ್ಕೆ ಬದ್ಧ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸುಮಲತಾ ಅವರು ‘ಜಿಲ್ಲಾಧಿಕಾರಿಗಳು, DHO ಅವರುಗಳು ಜಿಲ್ಲೆಯಲ್ಲಿ ಪ್ರತಿನಿತ್ಯ 3000 ಲೀಟರ್ ಆಕ್ಸಿಜನ್ ಕೊರತೆ ಇರುವುದಾಗಿ ಗಮನಕ್ಕೆ ತಂದಿದ್ದಾರೆ. ಪ್ರಸ್ತುತ MP ಫಂಡ್ ಇಲ್ಲದೇ ಇರುವ ಕಾರಣ ಹಾಗೂ ಇತರೆ ಮೂಲಗಳ ಅನುದಾನಗಳು ಬರುವುದು ತಡವಾಗುವ ಕಾರಣ ನಾನೇ ಸ್ವಂತ ಹಣದಿಂದ ಪ್ರತಿದಿನ 2000 ಲೀಟರ್ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಿದ್ದೇನೆ’ ಎಂದಿದ್ದಾರೆ.
‘ಆಕ್ಸಿಜನ್ ತುಂಬಿಸಲು ರಾಮನಗರ, ಮೈಸೂರು, ಹಾಸನ ಜಿಲ್ಲೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರೆಯಲು ಬಿಡಲಾಗದು. ಮಂಡ್ಯಕ್ಕೆ ಸ್ವಂತ ಆಕ್ಸಿಜನ್ ಉತ್ಪಾದನಾ ಘಟಕ ಬೇಕು. ಅತ್ಯಂತ ಶೀಘ್ರದಲ್ಲಿ ಘಟಕ ಸ್ಥಾಪನೆಗೆ ಕಾರ್ಯಕೈಗೊಳ್ಳಿರೆಂದು ಸೂಚಿಸಿದ್ದೇನೆ’ ಎಂದು ತಿಳಿಸುವ ಮೂಲಕ ವಿಪಕ್ಷ ನಾಯಕರ ಟೀಕೆಗಳಿಗೆ ಉತ್ತರಿಸಿದ್ದಾರೆ.
ಇದೇ ವೇಳೆ ಆಕ್ಸಿಜನ್ ಘಟನ ಸ್ಥಾಪಿಸಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವ ಭರವಸೆ ನೀಡಿದ್ದೇನೆ, ಘಟಕ ಸ್ಥಾಪನೆಗೆ ಬೇಕಾದ ಅನುಮತಿ ನೀಡುವಂತೆಯೂ ಸೂಚಿಸಿದ್ದೇನೆ. ಕೋವಿಡ್ ಮೂರನೇ ಅಲೆ ಬರುವ ವೇಳೆಗೆ ಜಿಲ್ಲೆಯಲ್ಲಿ 13,000 ಲೀಟರ್ ಸಾಮರ್ಥ್ಯದ ಘಟಕ ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಹೇಳುವ ಮೂಲಕ ಟೀಕಾಕಾರರ ಬಾಯ್ಮುಚ್ಚಿಸಿದ್ದಾರೆ.