ಸೈಯದ್ ಇಸಾಕ್ ಗ್ರಂಥಾಲಯಕ್ಕೆ 8243 ಪುಸ್ತಕಗಳ ದಾನ – ಸುರೇಶ್ ಕುಮಾರ್
ಬೆಂಗಳೂರು: ಇತ್ತೀಚೆಗೆ ಕೆಲ ದುಷ್ಕರ್ಮಿಗಳು ಕನ್ನಡ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಸರ್ವನಾಶವಾಗಿದ್ದವು. ಇದೀಗ ಸೈಯದ್ ಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ 8243 ಪುಸ್ತಕಗಳನ್ನು ದಾನ ರೂಪದಲ್ಲಿ ಒದಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ದುಷ್ಕರ್ಮಿಗಳ ಕೃತ್ಯಕ್ಕೆ ಗ್ರಂಥಾಲಯ ಬಲಿಯಾದ ಸುದ್ದಿ ತಿಳಿದ ತಕ್ಷಣವೇ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಿಗೆ ಇಲಾಖೆಯಿಂದ ಪುಸ್ತಕಗಳನ್ನು ಒದಗಿಸಲು ಸೂಚಿಸಲಾಗಿತ್ತು. ಹಾಗೆಯೇ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ನೆರವು ಒದಗಿಸುವಂತೆ ಕೋಲ್ಕತಾದ ರಾಜಾರಾಂ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.