ತಾಲಿಬಾನ್ ಉಗ್ರಗಾಮಿಗಳು ಕ್ರಿಕೆಟ್ ಆಟವನ್ನು ಪ್ರೀತಿಸ್ತಾರಂತೆ..!
ಫಘಾನಿಸ್ತಾನ ಈಗ ತಾಲಿಬಾನ್ ಉಗ್ರಗಾಮಿಗಳ ಕೈವಶದಲ್ಲಿದೆ. ಹೀಗಾಗಿ ಅಫಘಾನಿಸ್ತಾನದ ಜನತೆ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮುಂದೇನು ಅನ್ನೋ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಜೀವ ಉಳಿದ್ರೆ ಸಾಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ ಅಲ್ಲಿನ ಜನ.
ಇಷ್ಟು ದಿನ ತಾಲಿಬಾನ್ ಉಗ್ರರ ಆತಂಕವಿದ್ರೂ ಜನ ನಿರ್ಭಿತವಾಗಿ ಬದುಕುತ್ತಿದ್ದರು. ಆದ್ರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಜನ ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ. ತಾಲಿಬಾನ್ ಆಡಳಿತ ಯಾವ ಮಟ್ಟದಲ್ಲಿರುತ್ತೆ ಅನ್ನೋದು ಅಲ್ಲಿನ ಜನರಿಗೆ ಗೊತ್ತಿಲ್ಲದ ವಿಷ್ಯವೇನಲ್ಲ. ತಾಲಿಬಾನ್ ಉಗ್ರಗಾಮಿಗಳ ಅಟ್ಟಹಾಸದಿಂದ ಬೆಂದು ಹೋಗಿದ್ದ ಅಫಘಾನಿಸ್ತಾನ ಸ್ವಲ್ಪ ಮಟ್ಟಿಗೆ ನೀರಾಳವಾಗಿತ್ತು. ಆದ್ರೆ ಈಗ ಮತ್ತೆ ಅದೇ ಪರಿಸ್ಥಿತಿ ಬಂದಿದೆ. ಅಫಘಾನ್ ಸರ್ಕಾರ ತಾಲಿಬಾನ್ ಉಗ್ರರಿಗೆ ಶರಣಾಗಿದೆ. ಆಡಳಿತ ಸಂಪೂರ್ಣ ಈಗ ತಾಲಿಬಾನ್ ಗಳ ಕೈಯಲ್ಲಿದೆ.
ಈ ನಡುವೆ, ಅಫಘಾನಿಸ್ತಾನದ ಕ್ರಿಕೆಟ್ ಆಟಗಾರರು ಕೂಡ ಭಯದಲ್ಲಿದ್ದಾರೆ. ತಾಲಿಬಾನ್ ಉಪಟಳದ ನಡುವೆಯೂ ಅಫಘಾನ್ ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿತ್ತು. ಅಫಘನ್ ತಂಡದಲ್ಲಿ ರಶೀದ್ ಖಾನ್, ಮಹಮ್ಮದ್ ನಬಿಯಂತಹ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಈಗ ಅಫಘನ್ ಕ್ರಿಕೆಟ್ ತಂಡಕ್ಕೆ ಆತಂಕ ಶುರುವಾಗಿದೆ. ತಾಲಿಬಾನ್ ಆಡಳಿತದಲ್ಲಿ ಕ್ರಿಕೆಟ್ ಗೆ ಪ್ರೋತ್ಸಾಹ ಸಿಗುತ್ತಾ ? ಕೈಯಲ್ಲಿ ಸಿಡಿಮದ್ದುಗಳನ್ನು ಹಿಡಿದುಕೊಂಡು ಆಡಳಿತ ನಡೆಸುವ ತಾಲಿಬಾನ್ ಗಳು ಕ್ರಿಕೆಟ್ ಆಟಗಾರರಿಗೆ ಬ್ಯಾಟ್ -ಚೆಂಡು ಹಿಡಿಯಲು ಬಿಡುತ್ತಾರೋ ಅನ್ನೋ ಆತಂಕ ಎದುರಾಗಿದೆ.
ಆದ್ರೆ ಅಫಘನ್ ಕ್ರಿಕೆಟ್ ಸಂಸ್ಥೆಗೆ ನಂಬಿಕೆ ಇದೆ. ತಾಲಿಬಾನ್ ಆಡಳಿತದಲ್ಲೂ ಕ್ರಿಕೆಟ್ ಆಟಕ್ಕೆ ಬೆಂಬಲ ನೀಡುತ್ತಾರೆ ಅನ್ನೋ ವಿಶ್ವಾಸವಿದೆ. ಇದಕ್ಕೆ ಪೂರಕವಾಗಿ ಅಫಘಾನಿಸ್ತಾನ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಕ್ಮತ್ ಹಸನ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಗಳು ಕ್ರಿಕೆಟ್ ಆಟವನ್ನು ಪ್ರೀತಿಸ್ತಾರೆ. ಕ್ರಿಕೆಟ್ ಆಟಕ್ಕೆ ಬೆಂಬಲ, ಪ್ರೋತ್ಸಾಹವನ್ನು ನೀಡುತ್ತಾರೆ. ಅವರು ಮೊದಲಿನಿಂದಲೂ ಬೆಂಬಲವನ್ನು ನೀಡುತ್ತಿದ್ದರು. ಅವರಿಂದ ನಮ್ಮ ಕ್ರಿಕೆಟ್ ಚಟುವಟಿಕೆಗಳಿಗೆ ಏನು ತೊಂದರೆ ಆಗುವುದಿಲ್ಲ. ಕ್ರಿಕೆಟ್ ವಿಚಾರದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹಕ್ಮಿತ್ ಹಸನ್ ಹೇಳಿದ್ದಾರೆ.
ಇನ್ನು ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಅಫಘಾನಿಸ್ತಾನ ತಂಡ ಆಡುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ತಂಡದ ಪೂರ್ವ ಸಿದ್ಧತೆಗಾಗಿ ನಾವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅಲ್ಲದೆ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ಅಫಘಾನಿಸ್ತಾನ ನಡುವಿನ ತ್ರಿಕೋನ ಸರಣಿಯೂ ನಡೆಯಲಿದೆ. ಶ್ರೀಲಂಕಾ ಅಥವಾ ಮಲೇಶಿಯಾದಲ್ಲಿ ಈ ತ್ರಿಕೋನ ಸರಣಿಯನ್ನು ಆಯೋಜನೆ ಮಾಡಲು ಪ್ಲಾನ್ ಮಾಡುತ್ತಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಅಫಘಾನ್ ತಂಡದ ಸ್ಟಾರ್ ಆಟಗಾರರಾದ ರಶೀದ್ ಖಾನ್ ಮತ್ತು ಮಹಮ್ಮದ್ ನಬಿ ಮತ್ತು ಮುಜೀಬ್ ಝದ್ರಾನ್ ಅವರು ಇಂಗ್ಲೆಂಡ್ ನಲ್ಲಿದ್ದಾರೆ. ಅಲ್ಲಿ ಹಂಡ್ರೆಡ್ ಟೂರ್ನಿಯನ್ನು ಆಡುತ್ತಿದ್ದಾರೆ. ಜೊತೆಗೆ ಕ್ರಿಕೆಟ್ ಆಟಗಾರರ ಮತ್ತು ಅವರ ಕುಟುಂಬದ ಸುರಕ್ಷತೆಯ ಬಗ್ಗೆಯೂ ನಾವು ಗಮನ ಹರಿಸಿದ್ದೇವೆ. ಕಾಬೂಲ್ ನಲ್ಲಿ ಈಗ ಭಯದ ವಾತಾವರಣವಿಲ್ಲ. ಕಚೇರಿಗಳು ಇನ್ನು ಎರಡು ಮೂರು ದಿನಗಳಲ್ಲಿ ಮತ್ತೆ ಆರಂಭವಾಗುತ್ತವೆ. ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ ಎಂದು ಹಕ್ಮಿತ್ ಹಸನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಹಾಗೇ ನೋಡಿದ್ರೆ ಅಫಘಾನ್ ನಲ್ಲಿ ಕ್ರಿಕೆಟ್ ಆಟ ಪ್ರವರ್ಧಮಾನಕ್ಕೆ ಬಂದಿರುವುದು ತಾಲಿಬಾನ್ ಆಡಳಿತದ ಅವಧಿಯಲ್ಲೇ ಎಂದ ಅವರು, 1996ರಿಂದ 2001ರಿಂದ ಅಫಘನ್ ನಿರಾಶ್ರಿತರು ನೆರಯ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಟವನ್ನು ಅಭ್ಯಾಸವನ್ನು ನಡೆಸುತ್ತಿದ್ದರು. ತಾಲಿಬಾನ್ಗಳಿಂದ ಕ್ರಿಕೆಟ್ ಆಟಕ್ಕೆ ಏನು ತೊಂದರೆ ಆಗುವುದಿಲ್ಲ ಎಂದು ಹಕ್ಮಿತ್ ಹೇಳಿದ್ದಾರೆ.
ಒಟ್ಟಿನಲ್ಲಿ ಅಫಘಾನಿಸ್ತಾನದಲ್ಲಿ ನಡೆಯುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಕ್ರಿಕೆಟ್ ಆಡೋದು ಬಿಡಿ ಭಯವಿಲ್ಲದೆ ಓಡಾಡಲು ಕೂಡ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹಕ್ಮಿತ್ ಹಸನ್ ಯಾವ ಧೈರ್ಯದ ಮೇಲೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ.








