ಬೆಂಗಳೂರು: ಪತ್ನಿ ಬೇರೊಬ್ಬನ ಜೊತೆ ಓಡಿ ಹೋಗಲು ಸಹಾಯ ಮಾಡಿದ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಕಿರಣ್ (32) ಮತ್ತು ಆತನ ಸ್ನೇಹಿತ ಅಕ್ಷಯ್ (31) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಕಿರಣ್ ಸೆಕೆಂಡ್ ಹ್ಯಾಂಡ್ ಬೈಕ್ ಗಳ ಮಾರಾಟಗಾರನಾಗಿದ್ದು, ಹತ್ಯೆಯಾಗಿರುವ ಕೆಂಗೇರಿಯ ಹೇಮಂತ್ ಈತನಿಗೆ ಪರಿಚಯದ ವ್ಯಕ್ತಿಯಾಗಿದ್ದ. ಕಿರಣ್ನ ಹೆಂಡತಿ ಹೇಮಾ, ಮರಿಸ್ವಾಮಿ ಎಂಬಾತನೊಂದಿಗೆ ಓಡಿ ಹೋಗಿದ್ದರು ಎನ್ನಲಾಗಿದೆ.
ಹೇಮಂತ್ ಆಗಾಗ ಕೆಂಗೇರಿಯಿಂದ ಬಾಗಲಗುಂಟೆಗೆ ಕಿರಣ್ ಹಾಗೂ ಅಕ್ಷಯ್ ನನ್ನು ಭೇಟಿ ಮಾಡಲು ಬರುತ್ತಿದ್ದ. ಕೆಂಗೇರಿಯಲ್ಲಿ ಹೇಮಂತ್ ಇದ್ದ ರೆಸ್ಟೋರೆಂಟ್ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಮರಿಸ್ವಾಮಿ ಕೂಡ ಕಿರಣ್ ಮನೆಗೆ ಹೇಮಂತ್ ಜೊತೆಗೆ ಬರುತ್ತಿದ್ದ. ಈ ಸಂದರ್ಭದಲ್ಲಿ ಕಿರಣ್ ಪತ್ನಿಗೆ ಮರಿಸ್ವಾಮಿ ಹತ್ತರವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪತ್ನಿ ಕಾಣೆಯಾಗಿದ್ದಾಗ ಕಿರಣ್ ಹುಡುಕಾಟ ನಡೆಸುತ್ತಿದ್ದ ವೇಳೆ ಹತ್ಯೆಯಾದ ಹೇಮಂತ ಕರೆ ಮಾಡಿ ‘ನಿನ್ನ ಹೆಂಡತಿ ಮರಿಸ್ವಾಮಿ ಜೊತೆ ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾನೆ. ಇದಕ್ಕೆ ನೀನೇ ಸಹಾಯ ಮಾಡಿದ್ದೀಯಾ ಎಂದು ಆರೋಪಿಸಿ ಅಕ್ಷಯ್ ಜೊತೆ ಸೇರಿ ಆತನನ್ನು ಕರೆಯಿಸಿಕೊಂಡಿದ್ದಾನೆ. ನಂತರ ಬಾರ್ ನಲ್ಲಿ ಮದ್ಯ ಸೇವಿಸಿ, ಬಾಗಲಗುಂಟೆಯ ಪಾಪಣ್ಣ ಲೇಔಟ್ಗೆ ಹೇಮಂತ್ನನ್ನು ಕರೆದುಕೊಂಡು ಹೋಗಿ ದೊಣ್ಣೆ ಹಾಗೂ ಕಬ್ಬಿಣದ ವಸ್ತುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಹೇಮಂತ್ ನನ್ನು ಸ್ಥಲೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.