ಬೆಂಗಳೂರು: ಒಂದೇ ಕುಟಂಬದ 8 ಜನರು ತೆರಳುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಬಾಲಕಿ ಸಜೀವವಾಗಿ ದಹನವಾಗಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯ ನೆಲಮಂಗಲದ ಮಾದಾವರ ಹತ್ತಿರ ಈ ಘಟನೆ ನಡೆದಿದೆ. ಸಹೋದರನ ಮನೆಯಿಂದ ಊಟ ಮುಗಿಸಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಓಮ್ನಿ ಕಾರಿಗೆ ಬಲೆನೋ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಓಮ್ನಿ ಕಾರು ಪಲ್ಟಿಯಾಗಿ ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿದ್ದ 8 ಜನರ ಪೈಕಿ 7 ಜನರಿಗೆ ಸುಟ್ಟ ಗಾಯಗಳಾಗಿದ್ದರೆ, 15 ವರ್ಷದ ಬಾಲಕಿ ಸಜೀವ ದಹನವಾಗಿದ್ದಾಳೆ.
ದಿವ್ಯಾ(15) ಸಾವನ್ನಪ್ಪಿದ ಬಾಲಕಿ. ಮಾಯಾಂಕ್, ಮಂಜುಳ, ಸುನಿತಾ, ತರುಣ್, ಮಹೇಶ್, ನಮನ್ ಹಾಗೂ ಶಾಂತಿಲಾಲ್ ಗಾಯಾಳುಗಳಾಗಿದ್ದಾರೆ. ಇವರಲ್ಲಿ ನಮನ್, ಸುನಿತಾ, ಮಾಯಾಂಕ್ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಒಳಗಾದವರೆಲ್ಲ ಗುಜರಾತ್ ಮೂಲದವರು ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಡಿಕ್ಕಿಯಾಗುತ್ತಿದ್ದಂತೆ ಮೂರ್ನಾಲ್ಕು ಬಾರಿ ಪಲ್ಟಿಯಾಗಿದೆ. ಹೀಗಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಹಿಂಬಿದಿಯಿಂದ ಡಿಕ್ಕಿ ಹೊಡೆದಿದ್ದ ಚಾಲಕ ಮದ್ಯ ಸೇವಿಸಿ ಚಾಲನೆ ಮಾಡುತ್ತಿದ್ದ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.