ಸಂತೋಷ ಪಾಟೀಲ ಆತ್ಮಹತ್ಯೆ ಹಿಂದೆ ನಮ್ಮ ಬಿಜೆಪಿಯ ಒಬ್ಬ ಮುಖ್ಯಸ್ಥರ ಕೈವಾಡವೂ ಇದೆ : ಯತ್ನಾಳ್
ವಿಜಯಪುರ : ಗುತ್ತಿಗೆದಾರ ಸತೋಷ ಪಾಟೀಲ್ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ಮತ್ತು ನಮ್ಮ ಬಿಜೆಪಿಯವರದೂ ಕೂಡ ಕೈವಾಡವಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂತೋಷ ಪಾಟೀಲ ಆತ್ಮಹತ್ಯೆ ಹಿಂದೆ ನಮ್ಮ ಬಿಜೆಪಿಯ ಒಬ್ಬ ಮುಖ್ಯಸ್ಥರ ಕೈವಾಡವೂ ಇದೆ. ಸಚಿವ ಈಶ್ವರಪ್ಪ ಅವರನ್ನು ಇದರಲ್ಲಿ ಬಲಿಪಶು ಮಾಡಲಾಗಿದೆ. ಸಮಯ ಬಂದಾಗ ಅವರ ಹೆಸರು ಬಹಿರಂಗಗೊಳಿಸುವುದಾಗಿಯೂ ಅವರು ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿಯ ಒಬ್ಬರು ನಾಯಕರು ಇಂಥ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಸಿಡಿ ಮಾಡಿಸುವುದು, ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಎರಡು ಕಾರ್ಖಾನೆಗಳಿವೆ. ಇದರ ನಾಯಕರು ಓರ್ವ ಬಿಜೆಪಿ ಇನ್ನೊಬ್ಬ ಕಾಂಗ್ರೆಸ್ನವರಾಗಿದ್ದಾರೆ. ಇಬ್ಬರು ಮಹಾನ್ ಕಳ್ಳರು ಎಂದು ಹೇಳಿದರು.
ಇನ್ನೂ ಕರ್ನಾಟಕದಲ್ಲಿ ಸುಸಂಸ್ಕೃತ ರಾಜಕಾರಣ ಇದೆ. ಕೆಲವರಿಂದ ಇದು ಹಾಳಾಗುತ್ತಿದೆ. ರಾಜ್ಯದಲ್ಲಿ ದೇವರಾಜ ಅರಸು ಅವರಂತಹ ಎಂತೆಂಥ ರಾಜಕಾರಣಿಗಳು ಇದ್ದರು. ಆದರೆ, ಈಗ ಬ್ಲ್ಯಾಕ್ ಮೇಲ್ ಮಾಡುತ್ತಾ ರಾಜಕಾರಣ ನಡೆಯುತ್ತಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ ಹಾಗೆ ಸಿಡಿ ಹಗರಣ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಹಿಂದೆ ಒಂದೇ ತಂಡವಿದೆ. ಮಹಾನಾಯಕರೊಬ್ಬರ ಕೈವಾಡವಿದೆ. ಅವರ ಹೆಸರು ಬಹಿರಂಗವಾಗಬೇಕು ಎಂದರು.








