ಬೆಂಗಳೂರು: ಸೊಸೆ ಮನೆ ಬೆಳಗುವ ಗೃಹ ಲಕ್ಷ್ಮೀ ಎಂದೇ ಎಲ್ಲರೂ ಮನೆ ತುಂಬಿಸಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬಳು ಸೊಸೆ ಅತ್ತೆಯನ್ನೇ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೆ ಸೇರಿದಂತೆ ಮೂವರನನು ಪೊಲೀಸರು ಬಂಧಿಸಿದ್ದಾರೆ. ರಶ್ಮಿ, ಪುರುಷೋತ್ತಮ್, ಅಕ್ಷಯ್ ಬಂಧಿತ ಆರೋಪಿಗಳು. ರಶ್ಮಿ ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ತನ್ನ ಅತ್ತೆ ಲಕ್ಷ್ಮಮ್ಮರನ್ನು ಕೊಲೆ ಮಾಡಿದ್ದಳು.
ಆರೋಪಿ ರಶ್ಮಿಯು ಮಂಜುನಾಥ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ, ಮನೆಯ ಮೇಲೆ ಬಾಡಿಗೆ ಇದ್ದ ಅಕ್ಷಯ್ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ. ಇನ್ನೊಂದೆಡೆ ಮನೆಯ ಹಣದ ವ್ಯವಹಾರ ಕುರಿತು ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಮನೆ ವ್ಯವಹಾರವನ್ನು ತಾನೇ ನೋಡಿಕೊಳ್ಳಬೇಕು ಎಂದು ರಶ್ಮಿ ಬಯಸಿದ್ದಳು. ಹೀಗಾಗಿ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡುವ ಪ್ಲಾನ್ ಮಾಡಿದ್ದಳು.
ಅ. 10ರಂದು ಪ್ರಿಯಕರ ಅಕ್ಷಯ್ ಹಾಗೂ ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಹಾರ್ಟ್ ಅಟ್ಯಾಕ್ ಎಂದು ಸೀನ್ ಕ್ರಿಯೇಟ್ ಮಾಡಿದ್ದರು. ಈ ಕುರಿತು ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.