ಮಂಡ್ಯ: ಹಣಕ್ಕಾಗಿ ತಂದೆಯೇ ಮಗನ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸುಂಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಂಜಪ್ಪ (65) ಕೊಲೆಯಾಗಿರುವ ದುರ್ದೈವ ತಂದೆ. ಮಹದೇವ್ ಕೊಲೆ ಆರೋಪಿಯಾಗಿದ್ದು, ಹಣಕ್ಕಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಮಗ ಪರಾರಿಯಾಗಿದ್ದಾನೆ.
ನಂಜಪ್ಪ ತಮ್ಮ ಜಮೀನನ್ನು ಮಗನಿಗೆ ಹಾಗೂ ಮಗಳಿಗೆ ಹಂಚಿದ್ದರು. ಅಲ್ಲದೇ, 20 ಗುಂಟೆ ಜಮೀನನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಒಂದು ಭಾಗ ಮಗನಿಗೆ, ಒಂದು ಭಾಗ ಮಗಳು ಸೌಭಾಗ್ಯ ಎಂಬುವವರಿಗೆ ನೀಡಿದ್ದ. ಆನಂತರ ಸ್ವಲ್ಪ ಉಳಿದ ಹಣವನ್ನು ತಾವೇ ಇಟ್ಟುಕೊಂಡಿದ್ದರು. ಆದರೆ, ಮಗ ತನಗೆ ನೀಡಿದ್ದ ಹಣ ಖರ್ಚು ಮಾಡಿ, ತಂದೆಯ ಬಳಿ ಇರುವ ಹಣಕ್ಕಾಗಿ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಸೋಮವಾರ ಕೂಡ ತಂದೆಯ ಮನೆಗೆ ನುಗ್ಗಿ ಹಣಕ್ಕಾಗಿ ಜಗಳ ಮಾಡಿದ್ದಾನೆ. ಈ ವೇಳೆ ತಾಯಿ ಹಾಗೂ ತಂದೆಯ ಮೇಲೆ ಹಲ್ಲೆ ಮಾಡಿ, ತಂದೆಯ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.