ಮಹಿಳಾ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ವಿರುದ್ಧ ಗೆಲುವು ಸಾಧಿಸಿದೆ.
ತವರು ನೆಲದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ದ್ವಿತೀಯಾರ್ಧಕ್ಕೆ ಆರ್ ಸಿಬಿ ಕಾಲಿಟ್ಟಿದೆ. ದ್ವಿತೀಯಾರ್ದ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಎಲ್ಲ ತಂಡಗಳು ಅಲ್ಲಿಗೆ ತೆರಳಲಿವೆ. ಅಲ್ಲಿ ಎಲ್ಲ ತಂಡಗಳ ದ್ವಿತೀಯಾರ್ದ ಆರಂಭವಾಗಲಿದೆ.
ಮೊದಲಾರ್ಧದ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿವೆ. ರಾಯಲ್ ಅಭಿಮಾನಿಗಳ ಮುಂದೆ ಕೊನೆಯ ಬಾರಿ ಕಣಕ್ಕಿಳಿದ ಆರ್ಸಿಬಿ ತಂಡವು ಗೆಲುವಿನ ಉಡುಗೊರೆ ನೀಡಿದೆ. ಹೀಗಾಗಿ ಪಂದ್ಯ ಮುಗಿದ ನಂತರ ಅಭಿಮಾನಿಗಳಿಗೆ ಆರ್ಸಿಬಿ ತಂಡವು ಧನ್ಯವಾದ ತಿಳಿಸಿದೆ.
ತಂಡದ ಆಟಗಾರ್ತಿಯರು ಮೈದಾನದ ಸುತ್ತ ಸಾಗುತ್ತಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗುತ್ತಿದೆ.
ಯುಪಿ ವಾರಿಯರ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ಸ್ಮೃತಿ ಮಂಧಾನ ಅವರ ಅಮೋಘ ಆಟದಿಂದಾಗಿ ಗೆಲುವು ಸಾಧಿಸಿತು. ಮಂಧಾನ 50 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಬೌಂಡರಿಗಳೊಂದಿಗೆ 80 ರನ್ ಬಾರಿಸಿದ್ದಾರೆ. ಎಲ್ಲಿಸ್ ಪೆರ್ರಿ 37 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 58 ರನ್ ಗಳಿಸಿದರು. ಪರಿಣಾಮ ಆರ್ಸಿಬಿ ತಂಡವು 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ವಾರಿಯರ್ಸ್ ತಂಡ 23 ರನ್ ಗಳಿಂದ ಸೋಲು ಕಂಡಿದೆ.