ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆಟ ಶುರುವಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,68,063 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 277 ಮಂದಿ ಮಹಾಮಾರಿ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಸದ್ಯ ಪಾಸಿಟಿವ್ ದರ ಶೇ. 13.29 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5 ಕ್ಕಿಂತ ಜಾಸ್ತಿಯಾದ್ರೆ ಶಾಲಾ – ಕಾಲೇಜು ಬಂದ್ ಮಾಡಲಾಗುವುದು ಎಂದು ಸಚಿವ ಎನ್. ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5 ಕ್ಕಿಂತ ಜಾಸ್ತಿಯಾದ್ರೆ ಶಾಲಾ – ಕಾಲೇಜು ಬಂದ್ ಮಾಡಲಾಗುವುದು. ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಬಂದ್ ಮುಂದುವರಿಕೆ ಕುರಿತು ಶೀಘ್ರದಲ್ಲಿ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸ್ಫೋಟವಾಗಿದ್ದು, 55 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ 17 ಮಕ್ಕಳು ಹಾಗೂ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 38 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ನ ಟೈಟಲ್ ಸ್ಪಾನ್ಸರ್ ಆಗಿ ಭಾರತೀಯ ಹೆಮ್ಮೆಯ ಟಾಟಾ ಗ್ರೂಪ್ ಆಯ್ಕೆಗೊಂಡಿದೆ. ಮಿಲಿಯನ್ ಡಾಲರ್ ಟೂರ್ನಿಗೆ ಇಷ್ಟು ದಿನ ಚೀನಾದ ವೀವೋ ಟೈಟಲ್ ಸ್ಪಾನ್ಸರ್ ಆಗಿತ್ತು.ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ವೀವೋಗೆ ಗೇಟ್ ಪಾಸ್ ನೀಡಲಾಗಿದ್ದು, ಐಪಿಎಲ್ ಗೆ ಟೈಟಲ್ ಸ್ಪಾನ್ಸರ್ ಆಗಿ ಟಾಟಾ ಗ್ರೂಪ್ ಆಯ್ಕೆಗೊಂಡಿದೆ.
ದೇಶಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮತ್ತೊಂದು ಕ್ರಿಕೆಟ್ ಟೂರ್ನಿಯನ್ನು ಮುಂದೂಡಿದೆ. ಕೊರೊನಾ ಸೋಂಕಿನಿಂದಾಗಿ ಸದ್ಯ ರಣಜಿ ಟ್ರೋಫಿ ಮತ್ತು ಕರ್ನಲ್ ಸಿಕೆ ನಾಯುಡು ಟ್ರೋಫಿಗಳು ಮುಂದೂಡಲಾಗಿದೆ. ಇದೀಗ ಅಂಡರ್ -19 ಕೋಚ್ ಬೆಹರ್ ನಾಕೌಟ್ ಪಂದ್ಯಗಳನ್ನು ಮುಂದೂಡುವುದಾಗಿ ಬಿಸಿಸಿಐ ಘೋಷಿಸಿದೆ.