ಸಿಎಂ ಉದ್ಧವ್ ಠಾಕ್ರೆಗೆ ದಾವೂದ್ ಕಡೆಯವರ ಕರೆ – ಮಾತೋಶ್ರೀಯಲ್ಲಿ ಬಿಗಿ ಭದ್ರತೆ
ಮುಂಬೈ, ಸೆಪ್ಟೆಂಬರ್06: ಶನಿವಾರ ತಡರಾತ್ರಿ ಮಾತೋಶ್ರೀನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸವಾದ ಮಾತೋಶ್ರೀ ಲ್ಯಾಂಡ್ಲೈನ್ ಗೆ ದಾವೂದ್ ಇಬ್ರಾಹಿಂ ಕಡೆಯವರು ಎಂದು ಹೇಳಿಕೊಂಡು ಕರೆ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಭದ್ರತೆ ಬಿಗಿಗೊಳಿಸಲಾಗಿದೆ. ದಾವೂದ್ ಇಬ್ರಾಹಿಂ ಮುಖ್ಯಮಂತ್ರಿಯೊಂದಿಗೆ ಮಾತನಾಡಲು ಬಯಸಿದ್ದಾರೆ ಎಂದು ಕರೆ ಮಾಡಿದಾತ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾತೋಶ್ರೀ ಲ್ಯಾಂಡ್ಲೈನ್ಗೆ ಕರೆ ಮಾಡಲಾಗಿದ್ದು, ಕರೆ ಮಾಡಿದವನು ತಾನು ದುಬೈನಿಂದ ಕರೆ ಮಾಡುತ್ತಿದ್ದೇನೆ ಮತ್ತು ದಾವೂದ್ ಇಬ್ರಾಹಿಂ ಪರವಾಗಿ ಕರೆ ಮಾಡುತ್ತಿದ್ದಾನೆ ಎಂದು ತಿಳಿಸಿದ. ದಾವೂದ್ ನೇರವಾಗಿ ಸಿಎಂ ಜೊತೆ ಮಾತನಾಡಲು ಬಯಸಿದ್ದು ಸಿಎಂಗೆ ಕರೆ ರವಾನಿಸುವಂತೆ ಕರೆ ಮಾಡಿದಾತ ತಿಳಿಸಿದ್ದ.
ಎರಡು ಕರೆಗಳನ್ನು ಸ್ವೀಕರಿಸಲಾಗಿದ್ದು, ಎರಡೂ ಕರೆಗಳನ್ನು ಯಾರಿಗೂ ರವಾನಿಸದೆ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಕರೆ ಮಾಡಿದವ ಯಾವುದೇ ನಿರ್ದಿಷ್ಟ ಬೆದರಿಕೆಗಳನ್ನು ಹಾಕಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ಅಧಿಕೃತ ನಿವಾಸವಾದ ವರ್ಷಾ ದಲ್ಲಿಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಜ್ಯ ಏಜೆನ್ಸಿಗಳನ್ನು ಸಹ ಹೆಚ್ಚಿನ ಎಚ್ಚರಿಕೆಗೆ ಒಳಪಡಿಸಲಾಗಿದೆ. ಕರೆ ಮಾಡಿದವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಪುತ್ರ ಮತ್ತು ಯುವಸೇನೆ ಮುಖಂಡ ಆದಿತ್ಯ ಠಾಕ್ರೆ ಮತ್ತು ಕುಟುಂಬದ ಇತರ ಸದಸ್ಯರ ಭದ್ರತಾ ವ್ಯಾಪ್ತಿಯನ್ನು ಪೊಲೀಸ್ ಇಲಾಖೆಯಿಂದ ಹೆಚ್ಚಿಸಲಾಗಿದೆ.