ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯದಾತೆ ಕರುನಾಡಿನ ಉಮಾಬಾಯಿ
ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರವೇನು ಕಡಿಮೆ ಇಲ್ಲ. ನಮ್ಮ ರಾಜ್ಯದ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಮಗೆ ತಿಳಿದಿಲ್ಲ. ಅದರಲ್ಲಿ ಒಬ್ಬರು ಇಂದಿನ ನಮ್ಮ ಕಥಾ ನಾಯಕಿ ಉಮಾಬಾಯಿ ಕುಂದಾಪುರ.
ಉಮಾಬಾಯಿ ಕುಂದಾಪುರ ಅವರು 1892 ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಗೋಲಿಕೇರಿ ಕೃಷ್ಣರಾವ್ ಮತ್ತು ತಾಯಿ ಜುಂಗಾಬಾಯಿ. ಇವರ ಬಾಲ್ಯದ ಹೆಸರು ಭವಾನಿ ಗೋಳಿಕೇರಿ.
ಉಮಾಬಾಯಿ ಅವರು ಬಾಲ್ಯದಿಂದಲೇ ಸ್ವಾತಂತ್ರ್ಯ ಹೋರಾಟದ ಬಗ್ಗೆ ಒಲವು ಹೊಂದಿವರು. ಇವರು ತಮಗೆ ಬಂದ ಎಲ್ಲ ಹುದ್ದೆಗಳು ಮತ್ತು ಗೌರವಗಳನ್ನು ನಿರಾಕರಿಸಿದರು.
1924 ರಲ್ಲಿ 150 ಜನರ ಮಹಿಳಾ ತಂಡ ಕಟ್ಟಿಕೊಂಡು ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಕಾರಣದಿಂದ ಉಮಾಬಾಯಿ ಅವರನ್ನು 1932 ರಲ್ಲಿ ಬಂಧಿಸಿ ನಾಲ್ಕು ತಿಂಗಳ ಕಾಲ ಯರವಾಡ ಜೈಲಿನಲ್ಲಿ ಇರಿಸಲಾಯಿತು.
ಉಮಾಬಾಯಿ ಬಂಧಿತರಾದ ಸಮಯದಲ್ಲಿ ಬ್ರಿಟಿಷರು ಇವರ ಕರ್ನಾಟಕ ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಂಡರು. ಇವರ ಶಾಲೆಯನ್ನು ಬಂದ್ ಮಾಡಿಸಿದರು. ಮತ್ತು ಸ್ವಯಂ ಸೇವಾ ಸಂಸ್ಥೆ ‘ಭಗಿನಿ ಮಂಡಲ’ ವನ್ನು ಕಾನೂನುಬಾಹಿರ ಎಂದು ಘೋಷಿಸಿದರು.
ಈ ಎಲ್ಲ ಘಟನೆಗಳಿಂದ ಕ್ರೋದಿತಗೊಂಡ ಉಮಾಬಾಯಿ ಅವರು ವಸಾಹತುಶಾಹಿ ಶೋಷಣೆಯ ವಿರುದ್ಧ ಹೋರಾಡಲು ನಿರ್ಧರಿಸಿದರು. ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ, ಅವರ ಸಣ್ಣ ಮನೆಯಲ್ಲಿ ಆಶ್ರಯ ನೀಡಲು ಆರಂಭಿಸಿದರು.
1942 ರಲ್ಲಿ, “ಚಲೇ ಜಾವ್” (ಕ್ವಿಟ್ ಇಂಡಿಯಾ) ಚಳವಳಿ ಸಮಯದಲ್ಲಿ ಭೂಗತರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ ಆಶ್ರಯ ನೀಡಿದರು.
1946 ರಲ್ಲಿ, ಮಹಾತ್ಮ ಗಾಂಧಿಯವರು ಕಸ್ತೂರಬಾ ಟ್ರಸ್ಟ್ನ ಕರ್ನಾಟಕ ಶಾಖೆಯ ಮುಖ್ಯಸ್ಥರಾಗಿ ಉಮಾಬಾಯಿ ಅವರನ್ನು ನೇಮಿಸಿದರು. ಉಮಾಬಾಯಿ ಅವರು ಇತರ ಮಹಿಳೆಯರೊಂದಿಗೆ ಮಕ್ಕಳ ಕಲ್ಯಾಣ, ಆರೋಗ್ಯ ಕಾರ್ಯಕ್ರಮಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮ ಸೇವಕರಿಗೆ ತರಬೇತಿ ನೀಡುವ ಮೂಲಕ ಹಳ್ಳಿಗಳ ಸ್ಥಿತಿಯನ್ನು ಸುಧಾರಿಸಲು ಶ್ರಮಿಸಿದರು.