ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಭಯ ಭೀತರಾಗಿದ್ದಾರೆ. ಇದರ ಮಧ್ಯೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೇ ನಮ್ಮಲ್ಲಿ ಸೋಂಕು ಕಡಿಮೆ ಇದೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರ ಜೊತೆ ಸಭೆ ಬಳಿಕ ಮಾತನಾಡಿದ ಸಿಎಂ ಬಿಎಸ್ವೈ, ಕೋವಿಡ್ ನಿಯಂತ್ರಣ ಮಾಡುವಲ್ಲಿ ಸರ್ಕಾರ ಮುಂದಿದೆ. ಬೆಂಗಳೂರಲ್ಲಿ ಬೇರೆ ರಾಜ್ಯಗಳ ರಾಜಧಾನಿಗಳಿಗಿಂತ ಕೊರೋನಾ ಕಡಿಮೆ ಆಗಿದೆ. ಸರ್ಕಾರದ ಪರಿಶ್ರಮದಿಂದ ಕೋವಿಡ್ ಕಡಿಮೆಯಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅಂಕಿ- ಅಂಶಗಳ ಸಮೇತ ವಿವರಿಸಿದರು.
ಮುಂಬೈನಲ್ಲಿ 74,252 ಜನ ಕೊರೊನಾ ಸೋಂಕಿತರು ಇದ್ದಾರೆ. ಇದರಲ್ಲಿ 42,329 ಜನ ಗುಣಮುಖರಾಗಿದ್ದರೆ, 4284 ಮೃತಪಟ್ಟಿದ್ದಾರೆ. ನವದೆಹಲಿಯಲ್ಲಿ 80,188 ಜನ ಸೋಂಕಿತರಿದ್ದು, 49,301 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಲ್ಲಿ ಹೆಮ್ಮಾರಿ ಸೋಂಕಿನಿಂದ 2558 ಮಂದಿ ಮೃತಪಟ್ಟಿದ್ದಾರೆ. ಚೆನ್ನೈನಲ್ಲಿ 51,699 ಸೋಂಕಿತರಿದ್ದು, 31,045 ಗುಣಮುಖರಾಗಿದ್ದಾರೆ. 733 ಮೃತಪಟ್ಟಿದ್ದಾರೆ. ಕೊಲ್ಕತ್ತಾದಲ್ಲಿ 5402 ಜನರಿಗೆ ಪಾಸಿಟಿವ್ ಇದ್ದು, 3123 ಜನ ಗುಣಮುಖರಾಗಿದ್ದಾರೆ. 359 ಜನ ಸತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರು 3321 ಇದ್ದು, 81 ಮಂದಿ ಮೃತಪಟ್ಟಿದ್ದಾರೆ ಎಂದು ವಿವರಿಸಿದ ಬಿಎಸ್ ವೈ, ದೆಹಲಿ, ಚೆನ್ನೈ, ಕೊಲ್ಕತ್ತಾ, ಮುಂಬೈಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನಾವು ಶಕ್ತಿ ಮೀರಿ ಕೊರೊನಾ ಹಬ್ಬದಂತೆ ತಡೆದಿದ್ದೇವೆ. ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ. ಇಲ್ಲಿ ಶಂಕಿತರು ಕಂಡುಬಂದರೆ ಪರೀಕ್ಷೆ ಮಾಡುತ್ತೇವೆ ಎಂದು ತಿಳಿಸಿದರು.